ನವದೆಹಲಿ: 'ಶೇಕಡ 100ರಷ್ಟು ಪರಿಶುದ್ಧ' ಎಂದು ಲೇಬಲ್ ಹಾಕಿರುವ ಜೇನುತುಪ್ಪ, ಹಸುವಿನ ತುಪ್ಪ ಮತ್ತು ಖಾದ್ಯ ತೈಲಗಳಂತಹ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಡಾಬರ್ ಇಂಡಿಯಾಗೆ ನಿಷೇಧ ಹೇರಿದ್ದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಆದೇಶಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
'ಡಾಬರ್ ಇಂಡಿಯಾ ಸಂಸ್ಥೆಯು ಹಲವು ದಶಕಗಳಿಂದ ಈ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಎಫ್ಎಸ್ಎಸ್ಎಐ ವಿಚಾರಣೆ ನಡೆಸದೆಯೇ ಡಾಬರ್ ಉತ್ಪನ್ನಗಳ ಮೇಲೆ ನಿಷೇಧ ಹೇರಿರುವುದು ಸಮಂಜಸವಲ್ಲ. ಈ ಹಂತದಲ್ಲಿ ಡಾಬರ್ಗೆ ಮಧ್ಯಂತರ ಪರಿಹಾರ ನೀಡುವುದು ಸೂಕ್ತ' ಎಂದು ನ್ಯಾಯಮೂರ್ತಿ ಅಮಿತ್ ಮಹಾಜನ್ ತಿಳಿಸಿದ್ದಾರೆ.
'ವಿಚಾರಣೆಗೆ ಅವಕಾಶ ನೀಡದೆ ಇಂತಹ ನಿಷೇಧಾಜ್ಞೆ ಹೊರಡಿಸಬಾರದು. ಮುಂದಿನ ವಿಚಾರಣೆಯ ದಿನಾಂಕದವರೆಗೆ, ಎಫ್ಎಸ್ಎಸ್ಎಐ ಆದೇಶಕ್ಕೆ ತಡೆ ನೀಡಲಾಗಿದೆ' ಎಂದು ಮಹಾಜನ್ ಹೇಳಿದ್ದಾರೆ.
ಯಾವುದೇ ಶೋಕಾಸ್ ನೋಟಿಸ್ ಅಥವಾ ವಿಚಾರಣೆ ನಡೆಸದೆ ನಿಯಮಗಳನ್ನು ಉಲ್ಲಂಘಿಸಿ ಎಫ್ಎಸ್ಎಸ್ಎಐ ಆದೇಶ ಹೊರಡಿಸಿದೆ ಎಂದು ಡಾಬರ್ ಪರ ಹಿರಿಯ ವಕೀಲರು ವಾದಿಸಿದ್ದಾರೆ.
'ಡಾಬರ್ ಇಂಡಿಯಾಗೆ ಈ ಹಿಂದೆ ಹಲವು ಬಾರಿ ನೋಟಿಸ್ ಮತ್ತು ಸೂಚನೆಗಳನ್ನು ನೀಡಲಾಗಿತ್ತು. ಆಹಾರ ಉತ್ಪನ್ನಗಳ ಮೇಲೆ 'ಶೇಕಡ 100ರಷ್ಟು ಪರಿಶುದ್ಧ' ಎಂದು ಲೇಬಲ್ ಹಾಕಿಕೊಂಡು ಗ್ರಾಹಕರನ್ನು ದಾರಿತಪ್ಪಿಸುತ್ತಿದೆ' ಎಂದು ಕೇಂದ್ರ ಸರ್ಕಾರದ ಪರ ವಕೀಲರು ಎಫ್ಎಸ್ಎಸ್ಎಐ ಆದೇಶ ಸಮರ್ಥಿಸಿಕೊಂಡಿದ್ದಾರೆ.
'ಜೇನುತುಪ್ಪ, ಹಸುವಿನ ತುಪ್ಪ, ಆಯಪಲ್ ಸೈಡರ್ ವಿನೆಗರ್, ವರ್ಜಿನ್ ಕೊಬ್ಬರಿ ಎಣ್ಣೆ, ಎಳ್ಳಿನ ಎಣ್ಣೆ, ಎಳೆನೀರು, ತೆಂಗಿನ ಹಾಲು ಮತ್ತು ಇತರ ಉತ್ಪನ್ನಗಳ ಮೇಲೆ 'ಶೇಕಡ 100ರಷ್ಟು ಪರಿಶುದ್ಧ' ಎಂದು ಮುದ್ರಿಸಿ ಮಾರಾಟ ಮಾಡುತ್ತಿದ್ದ ಡಾಬರ್ ಇಂಡಿಯಾ ಲಿಮಿಟೆಡ್ಗೆ ನಿಷೇಧ ಹೇರಲಾಗಿದೆ ಎಂದು ಎಫ್ಎಸ್ಎಸ್ಎಐ ಈಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿತ್ತು.

