ಕೋಲ್ಕತ್ತಾ: ಗುರುವಾರ ಕಾಮ್ಯಾಕ್ ಬೀದಿಯಲ್ಲಿರುವ ಟಿಎಂಸಿ ಕಚೇರಿ ಬಳಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಟಿಎಂಸಿ ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹಾಗೂ ಮತ್ತಿಬ್ಬರು ಪಕ್ಷದ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಘರ್ಷಣೆಯ ಸಂಬಂಧ 13 ಮಂದಿಯನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಗುರುವಾರ ಕಾಮ್ಯಾಕ್ ಬೀದಿಯಲ್ಲಿರುವ ಟಿಎಂಸಿ ಕಚೇರಿಗೆ ಪೊಲೀಸರು ಹಾಗೂ ಕೋಲ್ಕತ್ತಾ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರವೇಶಿಸುವುದನ್ನು ಹಾಗೂ ಪಕ್ಷದ ಕಚೇರಿಯ ಕಟ್ಟಡದಿಂದ ನಾಮಫಲಕ ತೆರವುಗೊಳಿಸುವುದನ್ನು ತಡೆಯಲು ಕಚೇರಿಯಲ್ಲಿದ್ದ ಅಭಿಷೇಕ್ ಬ್ಯಾನರ್ಜಿ ಅವರ ಖಾಸಗಿ ಅಂಗರಕ್ಷಕರು ಹಾಗೂ ಬೆಂಬಲಿಗರು ಪ್ರಯತ್ನಿಸಿದಾಗ ಈ ಘರ್ಷಣೆ ನಡೆದಿದೆ.
ಕೋಲ್ಕತ್ತಾ ಪೊಲೀಸ್ ಸಿಬ್ಬಂದಿಗಳು ಹಾಗೂ ಕೋಲ್ಕತ್ತಾ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಹಾಕಲಾಗಿದೆ ಎಂಬ ದೂರುಗಳನ್ನು ಆಧರಿಸಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
"ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಒ'ಬ್ರಿಯಾನ್ ಹಾಗೂ ಹುಮಾಯೂನ್ ಕಬೀರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಂದು ಪ್ರಕರಣವನ್ನು ಕೆಎಂಸಿ ಅಡ್ವರ್ಟೈಸ್ ಮೆಂಟ್ ಇಲಾಖೆಯ ಅಧಿಕಾರಿಗಳು ನೀಡಿದ ದೂರನ್ನು ಆಧರಿಸಿ ದಾಖಲಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣವನ್ನು ಮಹಾನಗರ ಪಾಲಿಕೆಯ ಕೋರಿಕೆ ಮೇರೆಗೆ ದಾಖಲಿಸಿಕೊಳ್ಳಲಾಗಿದೆ" ಎಂದು ಕೋಲ್ಕತ್ತಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳು ಪೊಲೀಸ್ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಹಾಗೂ ಸರಕಾರ ನೀಡಿದ್ದ ನನ್ನ ವಾಕಿ ಟಾಕಿಯನ್ನು ಕಸಿದುಕೊಂಡರು ಎಂದು ಪೊಲೀಸ್ ಸರ್ಜೆಂಟ್ ಒಬ್ಬರು ನೀಡಿದ ದೂರನ್ನು ಆಧರಿಸಿ ಮೂರನೆಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
"ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 13 ಮಂದಿಯನ್ನ ಬಂಧಿಸಿದ್ದಾರೆ" ಎಂದು ಅವರು ತಿಳಿಸಿದ್ದಾರೆ. ಆದರೆ, ಬಂಧಿತರ ಗುರುತುಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

