ಮಂಜೇಶ್ವರ: ಯಾವುದೇ ಮಗು ಒಂಟಿಯಾಗಬಾರದು, ಯಾವುದೇ ಮಗುವನ್ನು ಕಡೆಗಣಿಸಬಾರದು; ಪ್ರತಿಯೊಂದು ಮಗುವೂ ನಮ್ಮ ಸ್ನೇಹಿತನೇ ಎಂಬ ಸೌಹಾರ್ದದ ಸಂದೇಶದೊಂದಿಗೆ ಸಮಗ್ರ ಶಿಕ್ಷಾ ಕಾಸರಗೋಡು, ಬಿ.ಆರ್.ಸಿ. ಮಂಜೇಶ್ವರದ ವತಿಯಿಂದ ವಿಶೇಷ ಅಗತ್ಯವಿರುವ ಮಕ್ಕಳಿಗಾಗಿ ಆಯೋಜಿಸಿದ 'ಓಣಚಂಗಾತಿ' ಕಾರ್ಯಕ್ರಮ ಗಮನ ಸೆಳೆಯಿತು.
ಬಿ.ಆರ್.ಸಿ.ಯ ಗೃಹಾಧಾರಿತ ಶಿಕ್ಷಣ ಪಡೆಯುತ್ತಿರುವ ಆಯಿಷಾ ಬರೀರಾ ಅವರ ಮನೆಯಲ್ಲಿ ನಡೆದ ಈ ಸ್ನೇಹಕೂಟವು ವಿಶೇಷ ಅಗತ್ಯವಿರುವ ಮಕ್ಕಳೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಅಪೂರ್ವ ವೇದಿಕೆಯಾಯಿತು.
ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂಚಾಯತಿ ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ಉದ್ಘಾಟಿಸಿದರು. ವಾರ್ಡ್ ಸದಸ್ಯೆ ಸುಮಯ್ಯ ರಫೀಕ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಚೆರಿಷ್ಮಾ ಸಿ. ಮಗುವಿಗೆ ಸ್ನೇಹ ಸನ್ಮಾನ ನೀಡಿದರು.
ಸಮಾರಂಭದಲ್ಲಿ ಡಿ.ಪಿ.ಒ.ಗಳಾದ ಶಶೀಧರನ್ ಪಿ. ಮತ್ತು ಶಂಸುದ್ದೀನ್ ಸಿ.ಎಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಉಪ್ಪಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ಕೆ., ಶಿಕ್ಷಕರಾದ ಸುಜಾತ ಕೆ. ಮತ್ತು ರವೀಂದ್ರ ಎನ್. ಅವರು ಶುಭಾಶಂಸನೆಗೈದರು. ಓಣಂನ ಹೂವಿನ ರಂಗೋಲಿ, ಸಾಂಪ್ರದಾಯಿಕ ಓಣಸದ್ಯ , ಹಾಗೂ ಜಿ.ಎಚ್.ಎಸ್.ಎಸ್. ಉಪ್ಪಳದ ವಿದ್ಯಾರ್ಥಿಗಳು ವಿವಿಧ ಕಲಾ ಕಾರ್ಯಕ್ರಮಗಳು ಮೆರುಗು ನೀಡಿದವು. ಮನೆಯಲ್ಲಿಯೇ ಶಿಕ್ಷಣ ಪಡೆಯುತ್ತಿರುವ ಮಗುವಿನೊಂದಿಗೆ ಸ್ನೇಹ, ಸಂತೋಷ ಮತ್ತು ಓಣಂನ ಸಂಭ್ರಮವನ್ನು ಹಂಚಿಕೊಂಡ ಈ ಒಗ್ಗೂಡುವಿಕೆ ಎಲ್ಲರಿಗೂ ಸ್ಮರಣೀಯ ಅನುಭವವಾಯಿತು.
ವಿಶೇಷ ಶಿಕ್ಷಕ ರೀಮಾ, ಜಸಿಂತಾ ಮೊಂತೆರೋ, ಅನಿತಾ ವೇಗಸ್, ಬಿಂದ್ಯಾ ಎನ್., ಸರಿತಾ ಎ., ಅನುಶ್ರೀ ಕೆ.ವಿ., ಭವ್ಯಾ ಬಿ.ಎಸ್., ವಿಶೇಷ ಅಧ್ಯಾಪಕರಾದ ಸುನಿಲ್ ಕುಮಾರ್ ಕೆ., ರಶ್ಮಿ ಕೆ., ಪ್ರಕಾಶ್ ಪಿ. ಹಾಗೂ ಸಿ.ಆರ್.ಸಿ.ಸಿ. ನಾರಾಯಣ ರಾಜ್ ಟಿ.ಎಸ್. ಅವರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
ಮಂಜೇಶ್ವರ ಬ್ಲಾಕ್ ಸಂಯೋಜಕ ರಾಜಗೋಪಾಲನ್ ಪಿ. ಸ್ವಾಗತಿಸಿ, ತರಬೇತುದಾರೆ ಸುಮಯ್ಯ ಎಂ.ಎ. ವಂದಿಸಿದರು.

.jpg)
.jpg)
