ಓರ್ಚಾ: ಮಧ್ಯ ಪ್ರದೇಶದ ಬುಂದೇಲ್ಖಂಡ್ನ ಓರ್ಚಾದಲ್ಲಿರುವ ಪ್ರಸಿದ್ಧ ಜಹಾಂಗೀರ್ ಮಹಲ್ ಹೆಸರು ಬದಲಿಸಿ, ಬುಂದೇಲಾವನ್ನು ಆಳಿದ್ದ ವೀರ್ ಸಿಂಗ್ ಹೆಸರಿಡುವ ಕುರಿತಂತೆ ಮುಖ್ಯಮಂತ್ರಿ ಮೋಹನ್ ಯಾದವ್ ಸುಳಿವು ನೀಡಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಕಾರ್ಯಕಾರಣಿಯಲ್ಲಿ ಭಾಗವಹಿಸಲು ಓರ್ಚಾಗೆ ತೆರಳಿದ್ದ ಅವರು, ರಾಮರಾಜ ಸರ್ಕಾರ ದೇವಾಲಯಕ್ಕೆ ಭೇಟಿ ನೀಡಿದರು.
ಈ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ರಾಜ ವೀರ ಸಿಂಗ್ ಅವರು ಜಹಾಂಗೀರ್ ಮಹಲ್ ಅನ್ನು ನಿರ್ಮಿಸಿದ್ದರು ಎಂದು ಹೇಳಿದ್ದಾರೆ.
ಜಹಾಂಗೀರ್ ಮಹಲ್ ಹೆಸರನ್ನು ಮುಂದೆ ವೀರ್ ಸಿಂಗ್ ಮಹಲ್ ಎಂದು ಬದಲಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ಅದು ವೀರ್ ಸಿಂಗ್ ಅವರಿಗೆ ಸೇರಿದ್ದು. ಅವರೇ ಅದನ್ನು ಕಟ್ಟಿಸಿದ್ದರು ಎಂದಿದ್ದಾರೆ.
ಇತಿಹಾಸದ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಅವುಗಳನ್ನು ನಾವು ಗೌರವಿಸುತ್ತೇವೆ. ತಿರಸ್ಕರಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಬುಂದೇಲಾ ರಾಜರುಗಳ ಶ್ರೀಮಂತ ಪರಂಪರೆ ಮತ್ತು ವಾಸ್ತುಶಿಲ್ಪವನ್ನು ಸಂರಕ್ಷಿಸುವ ಉದ್ದೇಶದಿಂದ ನಿವಾರಿ ಜಿಲ್ಲೆಯ ಓರ್ಚಾದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.
ಜಹಾಂಗೀರ್ ಮಹಲ್ಗೆ ವೀರ್ ಸಿಂಗ್ ಮಹಲ್ ಎಂದು ಮರುನಾಮಕರಣ ಮಾಡಲೇಬೇಕು. ಮುಖ್ಯಮಂತ್ರಿ ಅವರ ಅಭಿಪ್ರಾಯ ಸೂಕ್ತವಾಗಿದೆ ಎಂದು ಮಾಜಿ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

