ಕಾಸರಗೋಡು: ಸ್ವಾತಂತ್ರ್ಯ ಹೋರಾಟಗಾರ, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಲ್ಲಿ ಎಂಟು ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಬಿಟ್ಟುಕೊಟ್ಟ 30 ಸೆಂಟ್ಸ್ ಸ್ಥಳದಲ್ಲಿ ಕೇಂದ್ರ ಆರಂಭಿಸುವ ಕುರಿತು ಸಮಗ್ರ ಅಧ್ಯಯನ ನಡೆಸಿ ಎರಡು ತಿಂಗಳೊಳಗೆ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಾಹಂ ಉಪಸಮಿತಿಗೆ ರೂಪು ನೀಡಿದ್ದಾರೆ.
ಸೋಮವಾರ ಕಾಸರಗೋಡು ಜಿಲ್ಲಾ ಪಂಚಾಯಿತಿ ಆಡಳಿತ ಸಮಿತಿ ಸಭೆಯಲ್ಲಿ ಸದಸ್ಯ ಸೋಮಶೇಖರ ಜೆ.ಎಸ್. ಅವರು ನೀಡಿದ ನೋಟೀಸ್ನ ಅಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಿಷಯವನ್ನು ಮಂಡಿಸಿದ ಜೆ.ಎಸ್.ಸೋಮಶೇಖರ ಅವರು, ಡಾ. ಕಯ್ಯಾರ ಅವರ ಮಕ್ಕಳು ಸಂಶೋಧನಾ ಕೇಂದ್ರ ನಿರ್ಮಿಸುವುದಕ್ಕಾಗಿ ಬದಿಯಡ್ಕ ಪಂಚಾಯಿತಿಯ ಪೆರಡಾಲ ಕವಿತಾಕುಟೀರ ಸನಿಹ 30 ಸೆಂಟ್ಸ್ ಜಾಗವನ್ನು 2018ರಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿಗೆ ಹಸ್ತಾಂತರಿಸಿದ್ದು, ಒಪ್ಪಂದ ಪ್ರಕಾರ ಮೂರು ವರ್ಷದೊಳಗೆ ಕಟ್ಟಡ ಪೂರ್ತಿಗೊಳಿಸುವ ಭರವಸೆಯನ್ನು ನೀಡಲಾಗಿತ್ತು. ಜಾಗ ನೋಂದಾವಣೆಯಾಗಿ 8 ವರ್ಷಗಳ ನಂತರವೂ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸ್ವಾತಂತ್ರ್ಯಕ್ಕಾಗಿ ತ್ಯಾಗದ ಹೋರಾಟ ನಡೆಸಿ ಹಿರಿಯ ಮಹಾಕವಿ ಮತ್ತು ಅವರ ಕುಟುಂಬದೊಂದಿಗೆ ಮಾಡಿದ ದೊಡ್ಡ ನಿರ್ಲಕ್ಷ್ಯವಾಗಿದೆ. ಕಯ್ಯಾರ ಅವರ ಹೆಸರಲ್ಲಿ ಸಂಶೋಧನಾ ಕೇಂದ್ರ ನಿರ್ಮಿಸಲು ಕುಟುಂಬ ಒದಗಿಸಿದ ಭೂಮಿಯಲ್ಲಿ ಇಂದು ಕಾಡು ಬೆಳೆದಿದೆ. ಉಚಿತವಾಗಿ ನೀಡಿದ ಭೂಮಿಯಲ್ಲಿ ಮಹಾಕವಿ ಡಾ. ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಸಂಶೋಧನಾ ಕೇಂದ್ರದ ನಿರ್ಮಾಣವನ್ನು 3 ವರ್ಷಗಳೊಳಗೆ ಪೂರ್ಣಗೊಳಿಸಬೇಕೆಂಬ ಜಿಲ್ಲಾ ಪಂಚಾಯಿತಿ ಒಪ್ಪಂದ ಈಡೇರದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಮೂರು ಬೇಡಿಕೆಗಳನ್ನು ಮುಂದಿಡಲಾಗಿದೆ.
ಜಿಪಂಗೆ ಬೇಡಿಕೆ ಸಲ್ಲಿಕೆ:
ಜಿಲ್ಲಾ ಪಂಚಾಯಿತಿಯು ಮಹಾಕವಿ ಡಾ. ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಅಗತ್ಯ ಹಣವನ್ನು ತಕ್ಷಣವೇ ಮಂಜೂರು ಮಾಡಿ, ನಿರ್ಮಾಣ ಕಾರ್ಯವನ್ನು ತಕ್ಷಣ ಪ್ರಾರಂಭಿಸಬೇಕು, ಜಿಲ್ಲಾ ಪಂಚಾಯಿತಿಗೆ ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಾಗದಿದ್ದಲ್ಲಿ, ಉಚಿತವಾಗಿ ನೀಡಲಾದ 30 ಸೆಂಟ್ಸ್ ಭೂಮಿಯನ್ನು ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಕುಟುಂಬಕ್ಕೆ ಹಿಂದಿರುಗಿಸಬೇಕು ಮತ್ತು ಬದಿಯಡ್ಕದಲ್ಲಿ ನೋಂದಾಯಿಸಲಾದ ಕವಿತಾ ಕುಟೀರ ಪೆರಡಾಲ ಸ್ಮಾರಕ ಸಂಶೋಧನಾ ಕೇಂದ್ರವನ್ನು ನಿರ್ಮಿಸಲು ಅವಕಾಶ ನೀಡಬೇಕು.
ಅದೂ ಸಾಧ್ಯವಾಗದಿದ್ದರೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಯಮವನ್ನು ಬಳಸಿಕೊಂಡು ಸಂಶೋಧನಾ ಕೇಂದ್ರವನ್ನು ನಿರ್ಮಿಸಲು ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸುವ ಅಗತ್ಯ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ಒದಗಿಸಬೇಕು ಎಂಬ ಬೇಡಿಕೆಯನ್ನು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಜೆ.ಎಸ್. ಸೋಮಶೇಖರ ಮುಂದಿಟ್ಟಿದ್ದಾರೆ. 2018ರಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸುವ ಬಗ್ಗೆ ನಡೆದ ಜಿಪಂ ಆಡಳಿತ ಸಮಿತಿಯಲ್ಲಿದ್ದ, ಪ್ರಸಕ್ತ ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಹರ್ಷಾದ್ ವರ್ಕಾಡಿ ಅವರು ಸಹ ಕಯ್ಯಾರರ ಹೆಸರಲ್ಲಿರುವ ಇಂತಹ ಕೇಂದ್ರ ಸ್ಥಾಪಿಸುವ ಮಹತ್ವದ ಕುರಿತು ತಿಳಿಸಿದರು.



