ಮುಳ್ಳೇರಿಯ: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಪಠ್ಯಪೂರಕವಾದ ಹೊಸ ಹುರುಪು ಮೂಡಿಸಲು ಮತ್ತು ಭಾಷಾಭಿಮಾನವನ್ನು ಬೆಳೆಸಲು, ಕಾರಡ್ಕ ಜಿ.ವಿ.ಎಚ್.ಎಸ್.ಎಸ್. ಶಾಲೆಯಲ್ಲಿ 'ಗಮಕ ಶ್ರಾವಣ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಪೂರ್ಣವಾಗಿ ವಿದ್ಯಾರ್ಥಿಗಳಿಂದಲೇ ನಿರ್ವಹಿಸಲ್ಪಟ್ಟು ಗಮನ ಸೆಳೆಯಿತು. ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮತ್ತು ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಹಯೋಗದೊಂದಿಗೆ ಈ ಸಾಂಸ್ಕøತಿಕ ಹಬ್ಬ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಶಿಕ್ಷಕ ಸಂದೀಪ ಬಿ.ಎಸ್. ಅವರು, ಗಮಕ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಯನ್ನು ಜನಸಾಮಾನ್ಯರ ಹತ್ತಿರಕ್ಕೆ ಕೊಂಡೊಯ್ಯಲು ಮತ್ತು ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೇಮವನ್ನು ಜಾಗೃತಗೊಳಿಸಲು ಸಾಧ್ಯವಿದೆ ಎಂದು ತಿಳಿಸಿದರು. ಆದಿ ಗಮಕಿಗಳೆನಿಸಿರುವ ಕುಶಲವರು ಜನಿಸಿದ ಶ್ರಾವಣ ಮಾಸವನ್ನು 'ಗಮಕ ಶ್ರಾವಣ' ಎಂದು ಆಚರಿಸುವ ಸಂಪ್ರದಾಯದ ಬಗ್ಗೆ ಅವರು ಮಾಹಿತಿ ನೀಡಿದರು.
ಗಮಕ ಪರಿಷತ್ತಿನ ಕಾರ್ಯದರ್ಶಿ ವಿ.ಬಿ. ಕುಳಮರ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ಎಡನೀರು ಮಠದಲ್ಲಿ ಉದ್ಘಾಟನೆಗೊಂಡ ಈ ಸರಣಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ವಾಚನ ಮತ್ತು ವ್ಯಾಖ್ಯಾನವನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ನಿವೃತ್ತ ಶಿಕ್ಷಕ ಕೃಷ್ಣೋಜಿ ರಾವ್ ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ನೀಡಿ, ಭವಿಷ್ಯದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತೆ ಶುಭ ಹಾರೈಸಿದರು.
ಗಮಕ ಪರಿಷತ್ತಿನ ಕೇರಳ ಘಟಕದ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕಿ ಜ್ಯೋತಿ ಪಾಣೂರು ಉಪಸ್ಥಿತರಿದ್ದರು. ಕು. ಅನಘಸರಸ್ವತಿ ಪ್ರಾರ್ಥನೆಗೈದರು. ಕು. ವೈಷ್ಣವಿ ವಿ ಸ್ವಾಗತಿಸಿ, ಕು. ಯುಕ್ತಿ ವಂದಿಸಿದರು. ಕು. ಗ್ರೀಷ್ಮ ಕೆ.ಯಸ್. ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಕುರಿತು ಶಿಕ್ಷಕರಾದ ಡಾ. ಶ್ರೀಶ ಪಂಜಿತ್ತಡ್ಕ, ರತೀಶ ಡಿ, ನಯನ ಕುಮಾರಿ, ರಾಮಚಂದ್ರ ಮತ್ತು ವಿದ್ಯಾರ್ಥಿನಿ ಕು. ವರ್ಷ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. 'ಸೀತಾ ಪರಿತ್ಯಾಗ' ಕಾವ್ಯ ಭಾಗವನ್ನು ಕು. ದೇವಿಕಾ ಕೆ.ಆರ್. ಅವರು ಭಾವಪೂರ್ಣವಾಗಿ ವಾಚಿಸಿದರು. ಕೀರ್ತೇಶ್ ವ್ಯಾಖ್ಯಾನಿಸಿದರು.

.jpg)
.jpg)
