ಹೆಸರಿನ ಜತೆ ಭಾರತ ರತ್ನ, ಪದ್ಮ ಪ್ರಶಸ್ತಿಗಳನ್ನು ಬಳಸುವಂತಿಲ್ಲ: ಕೇಂದ್ರ!!
0
ಫೆಬ್ರವರಿ 12, 2019
ನವದೆಹಲಿ: ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗಳು ಬಿರುದುಗಳಲ್ಲ. ಹೀಗಾಗಿ ಅವುಗಳನ್ನು ಹೆಸರಿನ ಹಿಂದೆ ಅಥವಾ ಮುಂದೆ ಬಳಸುವಂತಿಲ್ಲ. ಒಂದು ವೇಳೆ ದುರ್ಬಳಕೆ ಮಾಡಿಕೊಂಡರೆ ಪ್ರಶಸ್ತಿಗಳನ್ನು ಹಿಂಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಎಚ್ಚರಿಕೆ ನೀಡಿದೆ.
ಮಂಗಳವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಅವರು, ರಾಷ್ಟ್ರೀಯ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮ ಶ್ರೀ ಗೌರವಗಳು ಬಿರುದುಗಳಲ್ಲ. ಹೀಗಾಗಿ ಅವುಗಳನ್ನು ಪ್ರಶಸ್ತಿ ಪುರಸ್ಕೃತರ ಹೆಸರಿನ ಹಿಂದೆ ಅಥವಾ ಮುಂದೆ ಬಳಸುವಂತಿಲ್ಲ ಎಂದು ಹೇಳಿದರು.
ಈ ರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ವೀಕರಿಸುವ ಪ್ರತಿ ವ್ಯಕ್ತಿಗಳಿಗೆ(ಮರಣೋತ್ತರ ಹೊರತುಪಡಿಸಿ) ಪ್ರಶಸ್ತಿಯ ನಿಮಯಗಳ ಬಗ್ಗೆ ತಿಳಿಸಲಾಗುತ್ತದೆ ಮತ್ತು ಹೆಸರಿನ ಹಿಂದೆ ಅಥವಾ ಮುಂದೆ ಬಳಸದಂತೆ ಸೂಚಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಶಸ್ತಿಗಳನ್ನು ದುರುಪಯೋಗ ಪಡಿಸಿಕೊಂಡರೆ ಆ ವ್ಯಕ್ತಿಯೂ ರಾಷ್ಟ್ರೀಯ ಪ್ರಶಸ್ತಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಅಹಿರ್ ಅವರು ಹೇಳಿದ್ದಾರೆ.

