ಇಂದಿನ ಟಿಪ್ಪಣಿ
೧. ‘ದಂಪತಿ’ ಒಂದು ಜೋಡಿ; ಬಹುವಚನ ಬಳಸಬೇಡಿ!
ಒಂದಕ್ಕಿಂತ ಹೆಚ್ಚು ಜೋಡಿಗಳ ವಿಚಾರವಾದರೆ ಆಗ ‘ದಂಪತಿಗಳು’ ಎಂದು ಬಹುವಚನ ಬಳಸಬೇಕು. ಉದಾಹರಣೆಗೆ- "100ಕ್ಕೂ ಹೆಚ್ಚು ದಂಪತಿಗಳಿಗೆ ಉಚಿತ ಸಾಮೂಹಿಕ ಷಷ್ಟಿಪೂರ್ತಿ ಸಮಾರಂಭ", "5000 ನವ ದಂಪತಿಗಳಿಂದ 770 ಸ್ವಾಮೀಜಿಗಳ ಪಾದಪೂಜೆ" - ಇಲ್ಲೆಲ್ಲ ದಂಪತಿಗಳು ಎಂದು ಬಹುವಚನ ಬಳಸಿರುವುದು ಸರಿ ಇದೆ.
"ವಾಷಿಂಗ್ಟನ್ ಡಿಸಿ. ಸುತ್ತಮುತ್ತಲಿನ ಕನ್ನಡ ದಂಪತಿಗಳೇ, ಬನ್ನಿ. ಪ್ರಣಯರಾಜ ಶ್ರೀನಾಥ್ ಜೊತೆಯಲ್ಲಿ ಒಂದು ಹಾಸ್ಯಮಯ ಸಂಜೆ ಕಳೆಯೋಣ. ‘ಆದರ್ಶ ದಂಪತಿ’ ಸ್ಪರ್ಧೆಯಲ್ಲಿ ಭಾಗವಹಿಸಿ." ಎಂದು ಈಗ ತಾನೆ ನಮ್ಮ ‘ಕಾವೇರಿ’ ಕನ್ನಡ ಸಂಘದ ಅಧ್ಯಕ್ಷರು ಕಳಿಸಿರುವ ಸಂದೇಶದಲ್ಲಿ "ದಂಪತಿಗಳು" ಮತ್ತು "ದಂಪತಿ" ಕ್ರಮವಾಗಿ ಬಹುವಚನ ಮತ್ತು ಏಕವಚನ ಅತ್ಯಂತ ಕರಾರುವಾಕ್ಕಾಗಿ ಬಳಕೆಯಾಗಿದೆ. [ಈ ಶನಿವಾರ, ಸೆ.22ರಂದು ಇಲ್ಲಿನ ‘ಕಾವೇರಿ’ ಕನ್ನಡ ಸಂಘದ ಗಣೇಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀನಾಥ್ ನಿರ್ವಹಣೆಯಲ್ಲಿ ‘ಆದರ್ಶ ದಂಪತಿ’ ಸ್ಪರ್ಧೆ ಇದೆ. ಪ್ರಥಮ ಬಹುಮಾನ ಗಳಿಸುವ ಒಂದು ದಂಪತಿ ‘ಆದರ್ಶ ದಂಪತಿ’. ಏಕವಚನ ಸರಿ.]
೨. ದೋಷ ರಾಶಿ ನಾಶ ಮಾಡು ಶ್ರೀಶ ಕೇಶವ...
ಇಲ್ಲಿ, ಫೇಸ್ಬುಕ್ ಪೋಸ್ಟ್ಗಳಿಂದಾಯ್ದ (ಲೇಖನಕೃಷಿಯಲ್ಲಿ ಸಾಕಷ್ಟು ನುರಿತ ಕೃಷಿಕರೇ ಬರೆದ!) ಅಥವಾ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ/ಲೇಖನಗಳಿಂದ ಕೆಲವು ಉದಾಹರಣೆಗಳನ್ನು ನೋಡೋಣ. ಇವುಗಳಲ್ಲಿ ಯಾವ ರೀತಿಯ ದೋಷಗಳಿವೆ ಎಂದು ತಿಳಿದುಕೊಳ್ಳೋಣ.
ಅ) "ಹೀಗೆ ಹೇಳಲಿಕ್ಕೆ ಹಲವಾರು ಕಾರಣವಿದೆ." - ಇದರಲ್ಲಿ ವಾಕ್ಯರಚನೆ ದೋಷಯುಕ್ತವಾಗಿದೆ. ‘ಹಲವಾರು’ (ಒಂದಕ್ಕಿಂತ ಹೆಚ್ಚು) ಅಂದಮೇಲೆ "ಕಾರಣಗಳಿವೆ" ಅಂತ ಬರೆಯಬೇಕು.
ಆ) "ವಜ್ರಕಾಯಕ್ಕೀಗ ಭೈರಿಗೆಯ ಗುರಿ." - ಇದರಲ್ಲಿ ಪದರೂಪ ಪರಿಚಯವಿಲ್ಲದಿರುವುದರಿಂದ ದೋಷ ಉಂಟಾಗಿದೆ. ‘ಭೈರಿಗೆ’ ಅಲ್ಲ, ‘ಬೈರಿಗೆ’ ಆಗಬೇಕು. ‘ಬೈರಿಗೆ’ಯ ಮೂಲ ತುಳು ಭಾಷೆ ಎನ್ನುತ್ತಾರೆ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ. ತುಳು ಸಹ ಮಹಾಪ್ರಾಣ ಬಳಕೆಯಿಲ್ಲದ ಭಾಷೆ.
ಇ) "ಗೌರಿ ಲಂಕೇಶ್ ಹತ್ಯೆಯ ಆರೋಪಿ ಪರಶುರಾಮ ವಾಘ್ಮೋರೆ..." - ಇದರಲ್ಲಿ ಪದಮೂಲ ಗೊತ್ತಿಲ್ಲದಿರುವುದರಿಂದ ದೋಷ ಉಂಟಾಗಿದೆ. ಕನ್ನಡ ಪತ್ರಿಕೆಗಳೆಲ್ಲವೂ ಆರೋಪಿಯ ಅಡ್ಡಹೆಸರನ್ನು "ವಾಘ್ಮೋರೆ" ಎಂದು ತಪ್ಪಾಗಿ ಬರೆಯುತ್ತಿವೆ. ಕೆಲವೆಡೆ ‘ವಾಗ್ಮೊರೆ’ ಎಂದು ಪ್ರಕಟವಾದದ್ದೂ ಇದೆ. ಸರಿಯಾದ ರೂಪ "ವಾಘ್ಮಾರೆ". ಈ ಅಡ್ಡಹೆಸರಿನವರು ಮಹಾರಾಷ್ಟ್ರದಲ್ಲಿ ಹೆಚ್ಚು ಜನರಿದ್ದಾರೆ. ವಾಘ್ ಅಂದರೆ ಹುಲಿ. ಮಾರ್ ಅಂದರೆ ಹೊಡೆ/ಕೊಲ್ಲು ಎಂದರ್ಥ. ‘ವಾಘ್ಮಾರೆ’ ಅಂದರೆ "ಹುಲಿಯನ್ನು ಕೊಲ್ಲಬಲ್ಲ ಶೂರರು" ಅಂತ ತಲೆಮಾರುಗಳ ಹಿಂದಿನಿಂದ ಬಂದಿರುವ ಉಪಾಧಿ.
ಈ) "ಪ್ಲಾಸ್ಟರ್ ಹಾಕಿರುವ ಎಡಗೈನಿಂದಲೇ ಕಿರಿಯ ವೈದ್ಯರ ಕೈ ನುಳಿಚಿದರು" - ಇದರಲ್ಲಿ ವಿಭಕ್ತಿಪ್ರತ್ಯಯ ಸೇರಿಸುವಾಗ ಯಾವ ವ್ಯಂಜನ ಬಳಸಬೇಕೆಂದು ಗೊತ್ತಿಲ್ಲದೆ ದೋಷವಾಗಿದೆ. ಎಡ+ಕೈ+ಇಂದ = ಎಡಗೈಯಿಂದಎಂದಾಗಬೇಕು (ಕ್ರಮವಾಗಿ ಆದೇಶ ಮತ್ತು ಆಗಮ ಸಂಧಿಗಳು).
ಉ) "ನೂರಾರು ಗಾಯಗೊಂಡ ಸಾರ್ವಜನಿಕರು ಅದೇ ಆಸ್ಪತ್ರೆಗೆ ದೌಡಾಯಿಸಿದರು." - ಇದರಲ್ಲಿ ಪದಪಲ್ಲಟ ದೋಷ ಇದೆ. ಬಹುಶಃ "Hundreds of wounded people ran to same hospital" ಎಂದು ಇಂಗ್ಲಿಷ್ನಲ್ಲಿ ಆಲೋಚಿಸಿ ಕನ್ನಡದಲ್ಲಿ ಬರೆದದ್ದಿರಬಹುದು. “ಗಾಯಗೊಂಡ ನೂರಾರು ಸಾರ್ವಜನಿಕರು ಅದೇ ಆಸ್ಪತ್ರೆಗೆ ದೌಡಾಯಿಸಿದರು" ಎಂದಾಗಬೇಕಿತ್ತು.
====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:
ಅ) ಸಂಭಂದ ತಪ್ಪು. ಸಂಬಂಧ ಸರಿ.
ಆ) ರೋಧನ, ರೋಧನೆ ತಪ್ಪು. ರೋದನ (ಅಳು, ಅಳುವುದು) ಸರಿ.
ಇ) ಜಂಭ ತಪ್ಪು. ಜಂಬ ಸರಿ. [ಅಚ್ಚಕನ್ನಡದ ಪದ. ಮಹಾಪ್ರಾಣ ಇರಲಿಕ್ಕೆ ಸಾಧ್ಯವಿಲ್ಲ]
ಈ) ಝಾವ ತಪ್ಪು. ಜಾವ ಸರಿ. [‘ಯಾಮ’ ಸಂಸ್ಕೃತ ಪದದ ತದ್ಭವ ‘ಜಾವ’]
ಉ) ಸ್ಪೂರ್ತಿ ತಪ್ಪು, ಸ್ಫೂರ್ತಿ ಸರಿ. [ಒತ್ತಕ್ಷರ ಮಹಾಪ್ರಾಣ ಫ]
ಬರಹ: ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.



