ಕಾಸರಗೋಡು : ಚುಟುಕು ಸಾಹಿತ್ಯ ಪ್ರಕಾರವು ವಿಶಾಲವಾದ ಸಾಹಿತ್ಯ ಸಾಗರದಲ್ಲಿ ವಿಶೇಷ ಪ್ರಾತಿನಿದ್ಯ ಹೊಂದಿದೆ. ಚುಟುಕುಗಳಲ್ಲಿ ಕುಟುಕುವ ಮನೋಭಾವದೊಂದಿಗೆ ಅಣಕು, ಹಾಸ್ಯ, ವಿಡಂಬನೆ ಹಾಗೂ ಚುರುಕುತನ ಇದೆ. ಉತ್ತಮ ಚುಟುಕಿನಲ್ಲಿರುವ ವಿಚಾರವು ಓದುಗನ ಮನಸ್ಸಿನಲ್ಲಿ ಅಚ್ಚಳಿಯದೆ, ಶಾಶ್ವತವಾಗಿ ಉಳಿಯುತ್ತದೆ ಎಂದು ಶಿಕ್ಷಣ ತಜ್ಞ ವಿ ಬಿ ಕುಳಮರ್ವ ಹೇಳಿದರು.
ಅವರು ಕಾಸರಗೋಡಿನ ಕನ್ನಡಗ್ರಾಮದಲ್ಲಿ ಭಾನುವಾರ ಕರ್ನಾಟಕ ನವನಿರ್ಮಾಣ ಸೇನೆ ಹಾಗೂ ಕರಾವಳಿ ಸಾಂಸ್ಕøತಿಕ ಪ್ರತಷ್ಠಾನದ ಆಶ್ರದಲ್ಲಿ ನಡೆದ ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಾವೇಶದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುಟುಕುಗಳಿಂದ ಸಮಾಜಕ್ಕೆ ಉತ್ತಮ ಸಂದೇಶಗಳು ರವಾನೆಯಾಗುತ್ತಿದ್ದು, ಅನೇಕ ಮಂದಿ ಕವಿಗಳು ಈ ಸಾಹಿತ್ಯ ಪ್ರಕಾರ ರಚನೆಯಲ್ಲಿ ನಿರತರಾಗಿದ್ದಾರೆ. ಚುಟುಕು ವಾಮನರೂಪಿನ ತ್ರಿವಿಕ್ರಮ. ಇಂದಿನ ಮಕ್ಕಳು ಆಧುನಿಕ ತಂತ್ರಜ್ಞಾನ ಪ್ರೇರಿತ ವಿಧಾನಗಳಿಗೆ ಬಂಧಿಯಾಗದೆ, ಸಾಹಿತ್ಯ ರಚನೆಯ ಕೆಲಸವನ್ನೂ ಮಾಡಬೇಕು. ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಅರಳುವಂತೆ ಪೋಷಕರು ಮಾಡಬೇಕು' ಎಂದು ಹೇಳಿದರು.
ಚುಟುಕು ಕವಿಗೋಷ್ಠಿಯನ್ನು ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಉದ್ಘಾಟಿಸಿದರು. ಕವಿಗೋಷ್ಠಿಯಲ್ಲಿ ಕೆ ನರಸಿಂಹ ಭಟ್ ಏತಡ್ಕ, ವಿರಾಜ್ ಅಡೂರು, ಆದ್ಯಂತ್ ಅಡೂರು, ಶಶಿಕಲಾ ಕುಂಬಳೆ, ಪ್ರಭಾವತಿ ಕೆದಿಲಾಯ ಪುಂಡೂರು, ಸುಶೀಲಾ ಪದ್ಯಾಣ, ಜ್ಯೋತ್ಸ್ನಾ ಕಡಂದೇಲು ಮೊದಲಾದವರು ಭಾಗವಹಿಸಿದ್ದರು. ಶಿವರಾಮ ಕಾಸರಗೋಡು ವಂದಿಸಿದರು. ಸತ್ಯನಾರಾಯಣ ಕಾಸರಗೋಡು ಸ್ವಾಗತಿಸಿ, ನಿರೂಪಿಸಿದರು.


