ಉಪ್ಪಳ: ಜನಾರ್ದನ ಪ್ರತಾಪನಗರ ಅವರ ಸ್ಮರಣಾರ್ಥ ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಕೆ.ಎಂ.ಸಿ. ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರ ಉಪ್ಪಳದ ಐಲ ಶ್ರೀ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ಭಾನುವಾರ ನಡೆಯಿತು.
ಶಿಬಿರವನ್ನು ಆರ್.ಎಸ್.ಎಸ್.ನ ಮಂಗಳೂರು ವಿಭಾಗದ ಸಂಘ ಚಾಲಕ ಗೋಪಾಲ ಚೆಟ್ಟಿಯಾರ್ ಉದ್ಘಾಟಿಸಿ ಮಾತನಾಡಿ, ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರದಲ್ಲಿ ಇತ್ತೀಚೆಗೆ ರಕ್ತದ ಅವಶ್ಯಕತೆಯೂ ಹೆಚ್ಚುತ್ತಿದೆ. ಆ ನಿಟ್ಟಿನಲ್ಲಿ ಎಲ್ಲಾ ಯುವಕರು ರಕ್ತದಾನ ಮಾಡುವಂತಾಗಬೇಕು ಎಂದರು. ರಕ್ತ ನೀಡುವುದರಿಂದ ಯಾವುದೇ ತೊಂದರೆ ಇಲ್ಲ. ಹಾಗಾಗಿ ಈ ಬಾರಿ ರಕ್ತ ನೀಡಿದವರು ಮುಂದಿನ ಬಾರಿ ಹೊಸಬರನ್ನು ರಕ್ತ ನೀಡುವಂತೆ ಪ್ರೇರೇಪಣೆ ನೀಡಬೇಕು ಹಾಗೂ ಸೇವಾ ಭಾರತಿ ಮಂಗಲ್ಪಾಡಿ ವರ್ಷದಲ್ಲಿ ಒಂದಕ್ಕಿಂತ ಹೆಚ್ಚಿನ ಬಾರಿ ಇಂತಹ ಕಾರ್ಯಕ್ರಮ ನಡೆಸುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಯಾಂಪೆÇ್ಕೀ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ಮಾತನಾಡಿ, ಇಂದು ಆಯೋಜಿಸಲ್ಪಟ್ಟ ರಕ್ತದಾನ ಶಿಬಿರವು ಸಮಾಜಕ್ಕೋಸ್ಕರ ಬದುಕಿ ತ್ಯಾಗ ಮಾಡಿದವರ ನೆನೆಪಿನಲ್ಲಿ ನಡೆಯುತ್ತಿದೆ. ಭಾರತ ದೇಶ ಇಂದು ಇಡೀ ವಿಶ್ವದಲ್ಲಿ ಇಷ್ಟೊಂದು ಗೌರವ ಹಾಗೂ ಮಾನ್ಯತೆ ಸಿಗಲು ಶಂಕರ ಆಳ್ವ ಹಾಗೂ ಜನಾರ್ದನ ರಂತಹ ಸಾವಿರ ಸಾವಿರ ಕಾರ್ಯಕರ್ತರ ಪರಿಶ್ರಮ ಹಾಗೂ ತ್ಯಾಗ ಕಾರಣ. ಅಂತಹವರ ತ್ಯಾಗದ ಪ್ರೇರಣೆ ನಿರಂತರವಾಗಿ ನಮಗೆ ಸಿಗಲು ಇಂತಹ ರಕ್ತದಾನದಂತಹ ಕಾರ್ಯಕ್ರಮ ಅವಶ್ಯಕ ಎಂದು ಹೇಳಿದರು. ಭಾರತದಲ್ಲಿ ದಾನಕ್ಕೆ ಇರುವಷ್ಟು ಮಹತ್ವ ಬೇರೆಲ್ಲೂ ಇಲ್ಲ. ಸಮಾಜಕ್ಕೆ ಸಮರ್ಪಣೆ ನೀಡುವ ಭಾಗವಾಗಿ ರಕ್ತದಾನವೂ ಶ್ರೇಷ್ಠವಾಗಿದೆ. ಆ ಶ್ರೇಷ್ಠ ಕೆಲಸ ನಾವು ಮಾಡೋಣ ಎಂದು ಅವರು ಕರೆನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಐಲ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು ಅವರು ವಹಿಸಿದ್ದರು. ಕೆ.ಎಂ.ಸಿ. ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಪ್ರತಿನಿಧಿಯಾಗಿ ಡಾ.ರತ್ನಂ ಉಪಸ್ಥಿತರಿದ್ದರು. ಸೇವಾ ಭಾರತಿ ಮಂಗಲ್ಪಾಡಿಯ ಕಾರ್ಯದರ್ಶಿ ಸತೀಶ ಶೆಟ್ಟಿ ಒಡ್ಡಂಬೆಟ್ಟು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಘು ಚೆರುಗೋಳಿ ವಂದಿಸಿದರು. ಶ್ರೀಧರ ಶೆಟ್ಟಿ ಪರಂಕಿಲ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 102 ಮಂದಿ ಈ ಕಾರ್ಯಕ್ರಮದಲ್ಲಿ ರಕ್ತದಾನವನ್ನು ಮಾಡಿದರು.


