ಕಾಸರಗೋಡು: ನಗರದ ಖಾಸಗೀ ಆಸ್ಪತ್ರೆಯೊಂದಕ್ಕೆ ಕಿಡಿಗೇಡಿಗಳು ಆಕ್ರಮಣ ನಡೆಸಿ ಪುಡಿಗಟ್ಟಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಕಾಸರಗೋಡು ನುಳ್ಳಿಪ್ಪಾಡಿಯ ಖ್ಯಾತ ಆಸ್ಪತ್ರೆಯಾದ ಕ್ಯಾರ್ವೆಲ್ ಆಸ್ಪತ್ರೆಗೆ ಭಾನುವಾರ ರಾತ್ರಿ 8.30ರ ವೇಳೆ ತಂಡವೊಂದು ಆಕ್ರಮಣ ನಡೆಸಿ ಭಾರೀ ಹಾನಿ ಉಂಟುಮಾಡಿತು. ಕೊಲೆ ಪ್ರಕರಣದ ಅಪರಾಧಿಯೋರ್ವನ ನೇತೃತ್ವದಲ್ಲಿ ಆಕ್ರಮಣ ನಡೆಯಿತೆಂದು ತಿಳಿದುಬಂದಿದೆ. ವ್ಯಾಪಕ ಆಕ್ರಮಣವನ್ನು ಕಂಡು ಆಸ್ಪತ್ರೆಯ ರೋಗಿಗಳು, ಸಿಬ್ಬಂಧಿಗಳು ಭಯಬೀತಿಯಿಂದ ಓಡಿದ್ದು, ಗೊಂದಲ ಸೃಷ್ಟಿಯಾಗಿತ್ತು.
ಅಪಘಾತದಲ್ಲಿ ಗಾಯಗೊಂಡ ಇಬ್ಬರು ಯುವಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದ ಯುವಕರ ತಂಡ ಆಕ್ರಮಣ ನಡೆಸಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವೈದ್ಯರ ಕೊಠಡಿಯ ಗಾಜಿನ ಆವರಣ ಪುಡಿಗಟ್ಟಿ ಬಳಿಕ ವ್ಯಾಪಕ ಪ್ರಮಾಣದಲ್ಲಿ ಹಾನಿಗೆ ತೊಡಗಿಕೊಂಡ ಆಕ್ರಮಿಗಳು ಹಲವು ಯಂತ್ರೋಪಕರಣಗಳು, ಆಸ್ಪತ್ರೆಯ ಮಂಚಗಳು, ವಿದ್ಯುತ್ ಉಪಕರಣಗಳು ಮೊದಲಾದವುಗಳನ್ನು ಹಾನಿಗೊಳಿಸಿದ್ದು, ಗಾಜಿನ ಚೂರುಗಳು ಹೊರಾವರಣದ ವಾಹನ ನಿಲುಗಡೆಗೊಳ್ಳುವಲ್ಲಿಯ ವರೆಗೆ ಚಲ್ಲಾಪಿಲ್ಲಿಯಾಗಿ ಎಸೆಯಲ್ಪಟ್ಟಿರುವುದು ಕಂಡುಬಂದಿದೆ. ರೋಗಿಗಳು ಹಾಗೂ ಸಿಬ್ಬನಂಧಿಗಳು ಓಡುವ ರಭಸದಲ್ಲಿ ಹಲವರು ಬಿದ್ದು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಘಟನೆಯ ವಿವರ ತಿಳಿದು ಆಗಮಿಸಿದ ವಿದ್ಯಾನಗರ ಪೋಲೀಸರು ಇಬ್ಬರನ್ನು ವಶಕ್ಕೆ ಪಡೆದು ತೀವ್ರ ತನಿಖೆಗೊಳಪಡಿಸಿದ್ದಾರೆ. ಸೇರಿದ ಜನರನ್ನು ಲಾಠಿಚಾರ್ಜ್ ಮೂಲಕ ನಿಯಂತ್ರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಆಸ್ಪತ್ರೆಯ ಸಿಸಿ ಟಿವಿ ಕ್ಯಾಮರಾ ಬಳಸಿ ತನಿಖೆ ಬಲಪಡಿಸಲಾಗುವುದೆಂದು ಪೋಲೀಸರು ತಿಳಿಸಿದ್ದಾರೆ. ಆಕ್ರಮಣಕ್ಕೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.


