ಕಾಸರಗೋಡು: ಮಂಜೇಶ್ವರ ಗ್ರಾಮ ಪಂಚಾಯಿತಿಯ 7ನೇ ವಾರ್ಡು ಮಚ್ಚಂಪಾಡಿಯ ಕಿಟ್ಟನಗುಂಡಿ ಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಪ್ರಾರಂಭಿಸುವ ಕ್ರಮದಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಂಬಂಧಪಟ್ಟವರು ಹಿಂದೆ ಸರಿಯುವಂತೆ ತ್ಯಾಜ್ಯ ಸಂಸ್ಕರಣಾ ಘಟಕ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿ ಮಂಜೇಶ್ವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎಚ್ ಅಬ್ದುಲ್ ಹಮೀದ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
2005ರಲ್ಲಿ ಶುಚಿತ್ವ ಕೇರಳ ಮಿಷನ್ ಮೂಲಕ ಸ್ಥಾಪಿಸಲುದ್ದೇಶಿಸಿದ್ದ ಘನತ್ಯಾಜ್ಯ ಸಂಸ್ಕರಣಾ ಘಟಕವನ್ನು ಅಂದು ಸ್ಥಳೀಯ ನಿವಾಸಿಗಳ ಪ್ರಬಲ ಹೋರಾಟದಿಂದ ಸ್ಥಗಿತಗೊಳಿಸಬೇಕಾಗಿ ಬಂದಿದ್ದರೂ, ಪ್ರಸಕ್ತ ಅದೇ ಪ್ರದೇಶದಲ್ಲಿ, ಹೊಸ ಡೈಪರ್ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಲು ಯೋಜನೆ ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ, ಕೆಲಸಕಾರ್ಯಗಳು ಮುಂದುವರಿಯುತ್ತಿದೆ. ವಿಪರ್ಯಾಸವೆಂದರೆ ಮಂಜೇಶ್ವರ ಗಾಮ ಪಂಚಾಯಿತಿ ಆಡಳಿತ ಸ್ಥಳೀಯ ಜನರ ಆರೋಗ್ಯ ಹಾಗೂ ಇತರ ಅಹವಾಲು ಲೆಕ್ಕಿಸದೆ ಯೋಜನೆಗೆ ಮಂಜೂರಾತಿ ನೀಡಿದೆ. ಗ್ರಾಮ ಪಂಚಾಯಿತಿಯ ಸ್ಥಳೀಯ ಸದಸ್ಯೆಯ ಗಮನಕ್ಕೂ ಬಾರದೆ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಫಿಸಲು ಪಂಚಾಯಿತಿ ಮುಂದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದ ಜನಪ್ರತಿನಿಧಿಗಳು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸದೆ ಯೋಜನೆ ಜಾರಿಗೆ ಮುಂದುವರಿಯುತ್ತಿರುವುದು ಖಂಡನೀಯ.
ನಿಗದಿತ ಯೋಜನಾ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳು, ಆರಾಧನಾಲಯಗಳಿದ್ದು, ನಾಲ್ಕು ವಾರ್ಡ್ಗಳಲ್ಲಿ 300 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಕಿಟ್ಟನಗುಂಡಿ ಸನಿಹ ಹೊಳೆ ಹರಿಯುತ್ತಿದ್ದು, ಈ ಯೋಜನೆಯಿಂದ ಆಸುಪಾಸಿನ ಜಲಮೂಲವೂ ಕಲುಷಿತಗೊಳ್ಳಲಿದೆ. ಅಲ್ಲದೆ ಈ ಪ್ರದೇಶವು ಮನೆಗಳನ್ನು ಹೊಂದಿರುವ ವಸತಿ ಪ್ರದೇಶವಾಗಿದೆ. ಇದು ಕಿಟ್ಟನ್ ಕುಂಡಿ ಹೊಳೆಯ ಪಕ್ಕದಲ್ಲಿದೆ, ಇದನ್ನು ಸಾಮಾನ್ಯ ಜನರು ಕುಡಿಯುವ ನೀರಿಗಾಗಿ ಅವಲಂಬಿಸಿದ್ದಾರೆ. ಈ ಪ್ರದೇಶವು ಕಾಡುಹಂದಿಗಳು ಮತ್ತು ಮುಳ್ಳುಹಂದಿಗಳಂತಹ ಅರಣ್ಯ ಪ್ರಾಣಿಗಳ ಆವಾಸಸ್ಥಾನವಾಗಿದೆ. ಸಾರ್ವಜನಿಕರು ಈ ಯೋಜನೆಯನ್ನು ಯಾವುದೇ ಬೆಲೆತೆತ್ತಾದರೂ ವಿರೋಧಿಸಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಅಬ್ದುಲ್ ಹಮೀದ್ ಬಡಾಜ್, ಆರಿಫ್ ಮಚ್ಚಂಪಾಡಿ, ಖಲೀಲ್ ಬಜಾಲ್, ಅಬ್ದುಲ್ ರಜಾಖ್ ಕಿಟ್ಟನಗುಂಡಿ, ಪಿ ಅಬೂಬಕರ್ ಸಿದ್ದೀಕ್, ಪಿ ಮಹಮ್ಮದ್, ಅಬ್ದುಲ್ ರಹ್ಮಾನ್ ಪುಚ್ಚೆತ್ತಬಯಲು ಉಪಸ್ಥಿತರಿದ್ದರು.

