ಬ್ಯಾಂಕಾಕ್: ಐದು ತಿಂಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದ ಕಾಂಬೋಡಿಯಾದ 18 ಯುದ್ಧ ಕೈದಿಗಳನ್ನು ಥಾಯ್ಲೆಂಡ್ ಬುಧವಾರ ಬಿಡುಗಡೆ ಮಾಡಿತು. ಗಡಿ ಸಂಘರ್ಷವನ್ನು ಕೊನೆಗೊಳಿಸಲು ಉಭಯ ದೇಶಗಳು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿವೆ.
ಥಾಯ್ಲೆಂಡ್ನ ಛಾಂಥಬುರಿ ಹಾಗೂ ಕಾಂಬೋಡಿಯಾದ ಪೈಲಿನ್ ಪ್ರಾಂತ್ಯಗಳ ಗಡಿಯಲ್ಲಿನ ಚೆಕ್ ಪಾಯಿಂಟ್ನಲ್ಲಿ ಎರಡೂ ದೇಶಗಳ ರಕ್ಷಣಾ ಸಚಿವರು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದರು.
'ಕಾಂಬೋಡಿಯಾದ 18 ಸೈನಿಕರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸುವುದು, ಸದ್ಭಾವನೆ, ವಿಶ್ವಾಸ ಹಾಗೂ ಅಂತರರಾಷ್ಟ್ರೀಯ ಮಾನವೀಯ ತತ್ವಗಳಿಗೆ ಬದ್ಧವಾಗಿದೆ. ಉಭಯ ದೇಶಗಳ ನಡುವೆ ಶಾಂತಿ ಮತ್ತು ಸ್ಥಿರತೆಯನ್ನು ಸೃಷ್ಟಿಸುತ್ತದೆ' ಎಂದು ಥಾಯ್ಲೆಂಡ್ನ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮೇ 28ರಂದು 'ಎಮರಾಲ್ಡ್ ಟ್ರಯಾಂಗಲ್' ಎಂಬ ಪ್ರದೇಶದಲ್ಲಿ ಎರಡೂ ಸೇನೆಗಳ ನಡುವೆ ಸಂಘರ್ಷ ನಡೆದಿತ್ತು. ಆ ಪ್ರದೇಶದ ಒಡೆತನದ ಬಗ್ಗೆ ಎರಡೂ ರಾಷ್ಟ್ರಗಳು ಹಕ್ಕು ಸಾಧಿಸುತ್ತಿವೆ. ಸಂಘರ್ಷದಲ್ಲಿ ಕಾಂಬೋಡಿಯಾದ ಒಬ್ಬ ಸೈನಿಕ ಹತನಾಗಿದ್ದ. ಬಳಿಕ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಕಳೆದ ಜುಲೈನಲ್ಲಿ ಎರಡೂ ದೇಶಗಳ ನಡುವೆ ಐದು ದಿನ ತೀವ್ರ ಸಂಘರ್ಷ ನಡೆದಿತ್ತು.

