HEALTH TIPS

SIR ವೇಳೆ ವ್ಯಾಪಕ ಅಕ್ರಮ ಎಂದು ಟಿಎಂಸಿ ಆರೋಪ: ಆಯೋಗದಿಂದ ಉತ್ತರ ಕೋರಿದ ಸುಪ್ರೀಂ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಅನಿಯಂತ್ರಿತವಾಗಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್‌ ಸಂಸದರು ಸಲ್ಲಿಸಿದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಈ ಕುರಿತು ಉತ್ತರ ನೀಡುವಂತೆ ಚುನಾವಣಾ ಆಯೋಗಕ್ಕೆ ತಿಳಿಸಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ನ ಕಾರ್ಯವಿಧಾನವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯರಾದ ಡೆರೆಕ್ ಒಬ್ರಯಾನ್‌, ಡೋಲಾಸೆನ್‌ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ಜಾಯ್‌ಮಾಲ್ಯ ಬಾಗ್ಚಿ ನೇತೃತ್ವದ ನ್ಯಾಯಪೀಠ, ಇದಕ್ಕೆ ಉತ್ತರಿಸುವಂತೆ ಆಯೋಗಕ್ಕೆ ತಿಳಿಸಿತು.

ಡೆರೆಕ್ ಒಬ್ರಯಾನ್‌ ಪರ ಹಾಜರಾದ ಹಿರಿಯ ವಕೀಲ ಕಪಿಲ್‌ ಸಿಬಲ್‌, 'ಎಸ್‌ಐಅರ್‌ ಕುರಿತು ಚುನಾವಣಾ ಆಯೋಗವು ತನ್ನ ಸೂಚನೆಗಳನ್ನು ಸಾಮಾಜಿಕ ಜಾಲತಾಣ 'ವಾಟ್ಸ್‌ಆಯಪ್‌' ಮೂಲಕ ನೀಡುತ್ತಿದೆ. ಯಾವುದೇ ಔಪಚಾರಿಕ ಆದೇಶಗಳಿಲ್ಲದೇ, ಬೂತ್‌ಮಟ್ಟದ ಅಧಿಕಾರಿಗಳಿಗೆ ಕೆಲಸ ಮಾಡುವಂತೆ ತಿಳಿಸಲಾಗುತ್ತಿದೆ' ಎಂದು ದೂರಿದರು.

ಅಲ್ಲದೇ, 'ಮತದಾರರ ವರ್ಗೀಕರಣಗೊಳಿಸಿ 'ತಾರ್ಕಿಕ ವ್ಯತ್ಯಾಸ'ವನ್ನು ಪ್ರಕಟಿಸಿದೆ. ಮತದಾರರ ದೋಷಗಳ ಕುರಿತಂತೆ ಅರೆನ್ಯಾಯಾಲಯದಂತೆ ನೋಟಿಸ್‌ ನೀಡಬಹುದಾಗಿದೆ' ಎಂದು ನ್ಯಾಯಪೀಠದ ಗಮನಸೆಳೆದರು.

ಈ ವಿಚಾರವನ್ನು ಪರಿಗಣಿಸಿದ ಸುಪ್ರೀಂಕೋರ್ಟ್‌, ಇಬ್ಬರು ಸಂಸದರ ಅರ್ಜಿಗೆ ಸಂಬಂಧಿಸಿದಂತೆ, ಸಾಮಾನ್ಯವಾದ ಉತ್ತರವನ್ನು ವಾರದ ಒಳಗಾಗಿ ನೀಡುವಂತೆ ಆಯೋಗಕ್ಕೆ ಸೂಚಿಸಿತು. ಮುಂದಿನ ವಿಚಾರಣೆಯನ್ನು ಜನವರಿ 19ಕ್ಕೆ ನಿಗದಿಪಡಿಸಿತು.

ಸಿಇಸಿಗೆ ಪತ್ರ ಬರೆದ ಮಮತಾ

'2002 ಮತದಾರರ ಪಟ್ಟಿಯನ್ನು ಕೃತಕ ಬುದ್ಧಿಮತ್ತೆ (ಎ.ಐ) ಆಧರಿಸಿ ಡಿಜಿಟಲೀಕರಣಗೊಳಿಸಿದ್ದರಿಂದ ಎಸ್‌ಐಆರ್‌ ಪ‍್ರಕ್ರಿಯೆಯಲ್ಲಿ ನೈಜ ಮತದಾರರನ್ನು ಗುರುತಿಸಲು ಸಂಕಷ್ಟ ಎದುರಾಗಿದೆ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್‌ ಕುಮಾರ್‌ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಎಸ್‌ಐಆರ್‌ ಕುರಿತಂತೆ ಸಿಇಸಿಗೆ ಐದನೇ ಪತ್ರ ಬರೆದಿರುವ ಅವರು '2002ರ ಮತದಾರರ ಪಟ್ಟಿಯನ್ನು ಎ.ಐ ಟೂಲ್‌ ಬಳಸಿ ಡಿಜಿಟಲೀಕರಣಗೊಳಿಸುವ ವೇಳೆ ಸಾಕಷ್ಟು ತಪ್ಪುಗಳು ಉಂಟಾಗಿವೆ. ದೊಡ್ಡ ಪ್ರಮಾಣದ ದತ್ತಾಂಶಗಳ ಹೊಂದಾಣಿಕೆಯಾಗಿಲ್ಲ. ನೈಜ ಮತದಾರರನ್ನು ತಪ್ಪಾಗಿ ವರ್ಗೀಕರಣ ಮಾಡಲಾಗಿದೆ' ಎಂದು ಪತ್ರದಲ್ಲಿ ದೂರಿದ್ದಾರೆ.

ಹೆಚ್ಚಿದ ಒತ್ತಡ-ಬಿಎಲ್‌ಒಗಳಿಂದ ಪ್ರತಿಭಟನೆ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಹೆಚ್ಚಿನ ಒತ್ತಡದಿಂದ ಬೂತ್‌ಮಟ್ಟದ ಅಧಿಕಾರಿಗಳು (ಬಿಎಲ್‌ಒ)ಗಳು ಮೃತಪಟ್ಟಿದ್ದರೂ ಆಯೋಗವು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಚುನಾವಣಾ ಆಯೋಗದ ಕಚೇರಿಯ ಮುಂದೆ ಬಿಎಲ್‌ಒಗಳು ಸೋಮವಾರ ಪ್ರತಿಭಟನೆ ನಡೆಸಿದರು. ಬಿಎಲ್‌ಒ ಅಧಿಕಾರ್‌ ರಕ್ಷಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅವರು ಎಸ್‌ಐಆರ್‌ ಪ್ರಕ್ರಿಯೆಯಿಂದ ರಾಜ್ಯದಾದ್ಯಂತ ಬಿಎಲ್‌ಒಗಳು ಹೆಚ್ಚಿನ ಒತ್ತಡಕ್ಕೆ ಸಿಲುಕಿದ್ದಾರೆ. ಹೆಚ್ಚಿನ ಕೆಲಸದ ಒತ್ತಡದಿಂದ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries