ಕಾಸರಗೋಡು: ಕೇರಳಾದ್ಯಂತ ವಿಷು ಹಬ್ಬವನ್ನು ಕಾಸರಗೋಡು ಸೇರಿದಂತೆ ಕೇರಳದಾದ್ಯಂತ ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು. ದೇವಾಲಯ, ದೈವಸ್ಥಾನ, ತರವಾಡು ಮನೆಗಳಲ್ಲಿ ವಿಷು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನ, ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ, ಬಜಕೂಡ್ಲು ಮುಗೇರುಹಿತ್ಲು ಸುವರ್ಣ ತರವಾಡುಮನೆ ಸೇರಿದಂತೆ ಜಿಲ್ಲೆಯ ಕೇರಳದ ನಾನಾ ದೇಗುಲಗಳಲ್ಲಿ ವಿಷು ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸುವಸ್ತುಗಳೊಂದಿಗೆ ವಿಷುಕಣಿ ವ್ಯವಸ್ಥೆಗೊಳಿಸಿ, ಬೆಳಗಿನ ಜಾವ ವಿಷು ಕಣಿ ದರ್ಶನದೊಮದಿಗೆ ವಿಶೇಷ ಪೂಜೆ ಆಯೋಜಿಸಲಾಯಿತು. ವಿಷು ಕಣಿ ಅಂಗವಾಗಿ ಪೆರ್ಲ ಸನಿಹದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ತಪ್ಪಂಗಾಯಿ ಸ್ಪರ್ಧೆ ನಡೆಯಿತು. ನುಣ್ಣಗೆ ಶುಚಿಗೊಳಿಸಿ ತೈಲದಲ್ಲಿ ಅದ್ದಿ ಭಕ್ತಾದಿಗಳೆಡೆಗೆ ಎಸೆಯುವ ತೆಂಗಿನ ಕಾಯಿಯನ್ನು ಒಬ್ಬರ ಕೈಯಿಂದ ಇನ್ನೊಬ್ಬರು ಕಿತ್ತುಕೊಳ್ಳುವ ಮೂಲಕ ದೇವಾಲಯದ ಹೊರಾಂಗಣಕ್ಕೆ ಪ್ರದಕ್ಷಿಣೆ ಬಂದು ಬಲಿಕಲ್ಲಿಗೆ ಒಡೆಯುವ ವಿಶೇಷ ಸ್ಪರ್ಧೆ ಇದಾಗಿದೆ. ಹಲವು ಮಂದಿ ಭಕ್ತಾದಿಗಳು ಸ್ಪರ್ಧೆಯಲ್ಲಿಪಾಲ್ಗೊಂಡಿದ್ದರು. ವಿಷು ಹಬ್ಬದಲ್ಲಿ ಕೊನ್ನೆಹೂವಿಗೆ ಹೆಚ್ಚಿ ಪ್ರಾಧಾನ್ಯತೆಯಿದ್ದು, ವರ್ಷಕ್ಕೊಮ್ಮೆ ವಿಷು ಹಬ್ಬ ಬಂದಾಗ ಕೇರಳ ನಾಡಲ್ಲಿ ಕೊನ್ನೆ ಹೂವು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತದೆ.
(ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಬುಧವಾರ ವಿಷುಕಣಿ ಸಜ್ಜುಗೊಳಿಸಲಾಗಿತ್ತು.)



