ಮಣಿಪುರವನ್ನು ಮತ್ತೊಮ್ಮೆ ಹೊಸ ಪ್ರತಿಭಟನೆಗಳು, ಹಿಂಸಾಚಾರಗಳು ನಲುಗಿಸಿವೆ. ಟ್ರೋಂಗ್ಲಾವೊಬಿ ಘಟನೆಯನ್ನು ಖಂಡಿಸಿ ಸೋಮವಾರ ರಾತ್ರಿ ಇಂಫಾಲ್ನ ಕೀಶಾಮ್ಥಾಂಗ್ ಪ್ರದೇಶದಲ್ಲಿ ಪ್ರತಿಭಟನೆಗಳು ನಡೆದಿವೆ. ಎಪ್ರಿಲ್ 7 ರಂದು ಮೊಯಿರಾಂಗ್ನ ಟ್ರೋಂಗ್ಲಾವೊಬಿ ಅವಾಂಗ್ ಲೈಕೈನಲ್ಲಿ ನಡೆದ ಬಾಂಬ್ ದಾಳಿಯಿಂದ ಪ್ರತಿಭಟನೆಗಳು ಭುಗಿಲೆದ್ದವು.
ಶಂಕಿತ ಉಗ್ರಗಾಮಿಗಳು ಮನೆಯೊಂದಕ್ಕೆ ಸ್ಫೋಟಕ ಎಸೆದಿದ್ದರು. ಇದರಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮಕ್ಕಳ ತಾಯಿಗೆ ಗಾಯಗಳಾಗಿವೆ. ಈ ಘಟನೆಯು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಮಣಿಪುರ ಹೈಕೋರ್ಟ್ ಆದೇಶದ ನಂತರ ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಮಾರಕ ಜನಾಂಗೀಯ ಹಿಂಸಾಚಾರದ ನಂತರ ಮೇ 2023 ರಿಂದ ಮಣಿಪುರ ಉದ್ವಿಗ್ನವಾಗಿದೆ. ಮೂರು ವರ್ಷಗಳ ಕಾಲ ಅಶಾಂತಿಯ ನಂತರ 2025 ರಲ್ಲಿ ಹಿಂಸಾಚಾರದ ವರದಿಗಳು ಕಡಿಮೆಯಾಗಿದ್ದರೂ, ರಾಜ್ಯದಲ್ಲಿ ಶಾಂತಿ ಇನ್ನೂ ನೆಲೆಸಿಲ್ಲ. ಈಗ ರದ್ದುಗೊಳಿಸಲಾದ ಮೇ 2023 ರ ಮಣಿಪುರ ಹೈಕೋರ್ಟ್ ಆದೇಶವು ಮೈತಿ ಸಮುದಾಯಕ್ಕೆ ಸಂರಕ್ಷಿತ ಪ್ರದೇಶಗಳಲ್ಲಿ ಭೂ ಮಾಲೀಕತ್ವ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಕೋಟಾ ಸೇರಿದಂತೆ ಕೆಲವು ಪ್ರಯೋಜನಗಳನ್ನು ನೀಡಿತ್ತು.
ಮಣಿಪುರದಲ್ಲಿ ಇತ್ತೀಚಿನ ಉದ್ವಿಗ್ನತೆಗೆ ಕಾರಣವೇನು?
ಎಪ್ರಿಲ್ 7 ರ ಮುಂಜಾನೆ ಮನೆಯ ಮೇಲೆ ನಡೆದ ಶಂಕಿತ ರಾಕೆಟ್ ದಾಳಿಯಲ್ಲಿ ಐದು ವರ್ಷದ ಬಾಲಕ ಮತ್ತು ಅವನ ಆರು ತಿಂಗಳ ಸಹೋದರಿ ಸಾವಿಗೀಡಾಗಿದ್ದರು. ಆ ದಿನದ ನಂತರ, ಪ್ರತಿಭಟನಾಕಾರರ ಗುಂಪೊಂದು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಶಿಬಿರಕ್ಕೆ ನುಗ್ಗಿ, ಅದನ್ನು ಧ್ವಂಸ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿತು. ನಂತರ ಭದ್ರತಾ ಪಡೆಗಳು ಗುಂಡು ಹಾರಿಸಿದವು ಇದರಲ್ಲಿ ಮೂವರು ಸಾವಿಗೀಡಾದರು. ಇನ್ನೂ ಎರಡು ಡಜನ್ಗೂ ಹೆಚ್ಚು ಜನರು ಗಾಯಗೊಂಡರು.
ಇಲ್ಲಿನ ಉದ್ವಿಗ್ನತೆ ಭದ್ರತಾ ನಿರ್ಬಂಧಕ್ಕೆ ಕಾರಣವಾದ ಕಾರಣ ಮಣಿಪುರದ ಕೆಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಯಿತು. ಕೆಲವೆಡೆ ಕರ್ಫ್ಯೂ ವಿಧಿಸಲಾಯಿತು.
ಇತ್ತೀಚಿನ ಬೆಳವಣಿಗೆಯಲ್ಲಿ, ಶಂಕಿತ ಉಗ್ರಗಾಮಿಗಳ ದಾಳಿಯಿಂದ ಇಬ್ಬರು ಮಕ್ಕಳು ಸಾವು ಮತ್ತು ಹಲವಾರು ನಾಗರಿಕರ ಸಾವನ್ನು ಪ್ರತಿಭಟಿಸಲು ವಿವಿಧ ಸಂಘಟನೆಗಳು ಕರೆ ನೀಡಿದ್ದ ಎರಡು ಬಂದ್ಗಳು ಸೋಮವಾರ ಮಣಿಪುರದ ಹಲವಾರು ಬೆಟ್ಟ ಮತ್ತು ಕಣಿವೆ ಜಿಲ್ಲೆಗಳಲ್ಲಿ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರಿತು. ಎಪ್ರಿಲ್ 7 ರಂದು ಬಿಷ್ಣುಪುರ ಜಿಲ್ಲೆಯ ಟ್ರೋಂಗ್ಲಾಬಿಯಲ್ಲಿ ನಡೆದ ಬಾಂಬ್ ದಾಳಿಯನ್ನು ಪ್ರತಿಭಟಿಸಿ ಮಹಿಳಾ ಸಂಘಟನೆ ಮೀರಾ ಪೈಬಿಸ್ ರವಿವಾರದಿಂದ ಐದು ದಿನಗಳ ಬಂದ್ಗೆ ಕರೆ ನೀಡಿದೆ.
ಎಪ್ರಿಲ್ 18 ರಂದು ಇಂಫಾಲ್ನಿಂದ ಉಖ್ರುಲ್ಗೆ ಹೋಗುತ್ತಿದ್ದ ನಾಗರಿಕ ವಾಹನಗಳ ಬೆಂಗಾವಲು ಪಡೆಯ ಮೇಲೆ ಶಂಕಿತ ಉಗ್ರರು ಗುಂಡು ಹಾರಿಸಿದ ನಂತರ ನಿವೃತ್ತ ಸೇನಾಧಿಕಾರಿ ಮತ್ತು ಇನ್ನೊಬ್ಬ ವ್ಯಕ್ತಿಯ ಸಾವನ್ನು ಖಂಡಿಸಿ ಯುನೈಟೆಡ್ ನಾಗಾ ಕೌನ್ಸಿಲ್ ಸೋಮವಾರದಿಂದ ಮೂರು ದಿನಗಳ "ಸಂಪೂರ್ಣ ಬಂದ್"ಗೆ ಕರೆ ನೀಡಿದೆ.
ಮೈತೈ ಸಮುದಾಯದ ನೆಲೆಯಾಗಿರುವ ಐದು ಕಣಿವೆ ಜಿಲ್ಲೆಗಳು ಮತ್ತು ಉಖ್ರುಲ್ ಮತ್ತು ಸೇನಾಪತಿ ಜಿಲ್ಲೆಗಳ ನಾಗಾ ಜನವಸತಿ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದೆ. ರಾಜ್ಯ ರಾಜಧಾನಿಯ ಉರಿಪೋಕ್ ಮತ್ತು ನಾಗರಂ ಪ್ರದೇಶ ಸೇರಿದಂತೆ ಇಂಫಾಲ್ ಕಣಿವೆಯ ವಿವಿಧ ಭಾಗಗಳಲ್ಲಿ ಹತ್ಯೆಗಳನ್ನು ವಿರೋಧಿಸಿ ಪ್ರತಿಭಟನೆಗಳು ನಡೆದವು.
ಏತನ್ಮಧ್ಯೆ, ಇಂಫಾಲ್ನ ತಂಗ್ಮೈಬಂದ್ ಪ್ರದೇಶದಲ್ಲಿ ಶನಿವಾರ ನಡೆದ ಪಂಜಿನ ಮೆರವಣಿಗೆ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದ ನಂತರ ಮೂವರು ಮಹಿಳಾ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಲಾಠಿ ಚಾರ್ಜ್, ಅಶ್ರುವಾಯು ಶೆಲ್ಗಳು, ಅಣಕು ಬಾಂಬ್ಗಳು, ರಬ್ಬರ್ ಗುಂಡುಗಳು ಮತ್ತು ಲೈವ್ ಗುಂಡುಗಳನ್ನು ಹಾರಿಸಿದವು. ಆದರೆ ಪ್ರತಿಭಟನಾಕಾರರು ಕಲ್ಲುಗಳನ್ನು ಎಸೆದು ಸ್ಲಿಂಗ್ಶಾಟ್ಗಳನ್ನು ಹಾರಿಸುವ ಮೂಲಕ ಪ್ರತಿದಾಳಿ ನಡೆಸಿದರು.
ಸಿಆರ್ಪಿಎಫ್ನ ಮೂವರು ಸಿಬ್ಬಂದಿ ರಿತಿಕಾ ಕುಮಾರಿ, ಸಂತೋಷ್ ಕುಮಾರಿ ಮತ್ತು ಸಂಸಿತಾ ಇಂದ್ರಾ ಸೇರಿದಂತೆ ಕನಿಷ್ಠ ಆರು ಜನರು ಗಾಯಗೊಂಡಿದ್ದು ಅವರಿಗೆ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಮಣಿಪುರದಲ್ಲಿ ಮೇ 2023 ರಿಂದ ಶುರುವಾದ ಹಿಂಸಾಚಾರದಲ್ಲಿ ಕನಿಷ್ಠ 260 ಮಂದಿ ಸಾವಿಗೀಡಾಗಿದ್ದು ಸುಮಾರು 60,000 ಜನರನ್ನು ಸ್ಥಳಾಂತರಗೊಂಡಿದ್ದಾರೆ. ಇದು ಮೊದಲು ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಪ್ರಾರಂಭವಾಯಿತು. ಅಂದಿನಿಂದ ಬಹುತೇಕ ಎಲ್ಲಾ ಗುಂಪುಗಳನ್ನು ಒಳಗೊಂಡಿತ್ತು.
ಕಳೆದ ಎರಡು ವಾರಗಳಲ್ಲಿ, ಮೂರು ಪ್ರಮುಖ ಸಮುದಾಯಗಳಾದ ಮೈತೈ, ಕುಕಿ-ಝೋ ಮತ್ತು ನಾಗಾ ಹೊಸ ಹಿಂಸಾಚಾರ, ಪ್ರತಿಭಟನೆಗಳು ಮತ್ತು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸುತ್ತಿವೆ. ಈ ಬದಲಾವಣೆಯು ಪರಿಸ್ಥಿತಿಯನ್ನು ಹೆಚ್ಚು ಅಸ್ಥಿರಗೊಳಿಸಿದೆ ಮತ್ತು ನಿಯಂತ್ರಿಸಲು ಕಷ್ಟಕರವಾಗಿಸಿದೆ. ಮೇ 2023 ರಿಂದ, ಸಂಘರ್ಷವು ಮುಖ್ಯವಾಗಿ ಇಂಫಾಲ್ ಕಣಿವೆಯಲ್ಲಿ ಮೈತೈಗಳು ಮತ್ತು ಸುತ್ತಮುತ್ತಲಿನ ಬೆಟ್ಟಗಳಲ್ಲಿ ಕುಕಿ-ಝೋ ಗುಂಪುಗಳನ್ನು ಒಳಗೊಂಡಿತ್ತು. ಹೆಚ್ಚಾಗಿ ಉತ್ತರ ಜಿಲ್ಲೆಗಳಲ್ಲಿ ನೆಲೆಸಿರುವ ನಾಗಾ ಸಮುದಾಯಗಳು ಹೆಚ್ಚಾಗಿ ತಟಸ್ಥವಾಗಿದ್ದವು.
ಬಂದ್ನಿಂದ ಜನಜೀವನ ಸ್ತಬ್ಧ:
ಐದು ದಿನಗಳ ಸಂಪೂರ್ಣ ಬಂದ್ನಿಂದ ಕಣಿವೆ ಜಿಲ್ಲೆಗಳಲ್ಲಿ ಸಾಮಾನ್ಯ ಜನಜೀವನ ಸ್ತಬ್ಧಗೊಂಡಿದೆ. ಎಪ್ರಿಲ್ 19 ರಂದು ಪ್ರಾರಂಭವಾದ ಈ ಬಂದ್ಗೆ ಮೀರಾ ಪೈಬಿಸ್, ಹಲವಾರು ನಾಗರಿಕ ಸಮಾಜ ಸಂಸ್ಥೆಗಳು ಸಾಮೂಹಿಕ ನೇತೃತ್ವ ವಹಿಸಿದ್ದಾರೆ.
ಮಾರುಕಟ್ಟೆಗಳು, ಶಾಲೆಗಳು, ಸರ್ಕಾರಿ ಕಚೇರಿಗಳು ಮತ್ತು ಸಾರಿಗೆ ಸೇವೆಗಳು ಮೊದಲ ದಿನ ಮುಚ್ಚಿದ್ದವು. ಕೆಲವು ಪ್ರದೇಶಗಳಲ್ಲಿ ಅಗತ್ಯ ಸೇವೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ದಾಳಿಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಮತ್ತು ಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಐದು ದಿನಗಳ ಸಂಪೂರ್ಣ ಬಂದ್ ರಾಜಧಾನಿ ಇಂಫಾಲ್ ಸೇರಿದಂತೆ ಮಣಿಪುರದ ಕಣಿವೆ ಜಿಲ್ಲೆಗಳನ್ನು ಬಾಧಿಸಿವೆ. ಎಪ್ರಿಲ್ 19 ರಂದು ಮಣಿಪುರದಲ್ಲಿ 5 ದಿನಗಳ ಸಂಪೂರ್ಣ ಬಂದ್ ಆರಂಭವಾಯಿತು, ಕಣಿವೆ ಜಿಲ್ಲೆಗಳು ಸ್ಥಗಿತಗೊಂಡವು. ಮೀರಾ ಪೈಬಿಸ್ ಸೇರಿದಂತೆ ನಾಗರಿಕ ಸಮಾಜ ಗುಂಪುಗಳು ಆಯೋಜಿಸಿರುವ ಈ ಪ್ರತಿಭಟನೆಯು ಬಿಷ್ಣುಪುರದಲ್ಲಿ ಸಂಭವಿಸಿದ ಸ್ಫೋಟದ ನಂತರ ಉದ್ಭವಿಸಿದೆ, ಇದು ದೈನಂದಿನ ಜೀವನಕ್ಕೆ ಭಾರಿ ಅಡ್ಡಿ ಉಂಟುಮಾಡಿದೆ.
ಕಟ್ಟುನಿಟ್ಟಿನ ಹಾಜರಾತಿ ಆದೇಶಗಳನ್ನು ಹೊರಡಿಸಿದ ಸರ್ಕಾರ:
ಮಣಿಪುರ ಸರ್ಕಾರವು ನೌಕರರು ಕಚೇರಿಗಳಿಗೆ ಹಾಜರಾಗುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು ಗೈರುಹಾಜರಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ರಾಜ್ಯವು ಪ್ರಮುಖ ಪ್ರದೇಶಗಳಲ್ಲಿ ನಿರಂತರ ಬಂದ್ ಎದುರಿಸುತ್ತಿರುವಾಗ ಈ ಆದೇಶ ಬಂದಿದೆ. ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದಂತೆ ನ್ಯಾಯ ಮತ್ತು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಅದೇ ವೇಳೆ ನಾಗರಿಕ ಸಮಾಜ ಗುಂಪುಗಳಿಂದ ವ್ಯಾಪಕ ಭಾಗವಹಿಸುವಿಕೆ ಕಂಡುಬಂದಿದೆ.
ಇದರ ಪರಿಣಾಮವು ಎಲ್ಲಾ ಕ್ಷೇತ್ರಗಳಲ್ಲಿ ಗೋಚರಿಸುತ್ತಿದೆ. ಹಾಜರಾತಿ ಕಡಿಮೆ ಇರುವುದರಿಂದ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳು ಮುಚ್ಚಲ್ಪಟ್ಟಿವೆ. ದೈನಂದಿನ ಕಾರ್ಯಚಟುವಟಿಕೆಗಳು ಅಸ್ತವ್ಯಸ್ತಗೊಂಡಿವೆ, ಕೆಲವು ಪ್ರದೇಶಗಳಲ್ಲಿ ಸೀಮಿತ ಅಗತ್ಯ ಸೇವೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
ಪ್ರತಿಭಟನೆಗಳ ಬಗ್ಗೆ ಪೊಲೀಸ್ ಎಚ್ಚರಿಕೆ:
ಸಮಾಜ ವಿರೋಧಿ ಅಂಶಗಳು ಪ್ರತಿಭಟನೆಗಳ ಲಾಭ ಪಡೆಯಲು ಪ್ರಯತ್ನಿಸುತ್ತಿವೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಕೆಲವು ಗುಂಪುಗಳು ಪ್ರತಿಭಟನೆಗಳನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಮತ್ತು ಉಲ್ಬಣಗೊಳ್ಳುವುದನ್ನು ತಡೆಯಲು ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಬೇಡಿಕೆಗಳು ಮತ್ತು ಮುಂದಿನ ಕ್ರಮಗಳೇನು?:
ಬಿಷ್ಣುಪುರ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐದು ವರ್ಷದ ಬಾಲಕ ಮತ್ತು ಐದು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ ನಂತರ ಪ್ರತಿಭಟನೆಗಳು ಭುಗಿಲೆದ್ದವು. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಬೆಟ್ಟದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಕಿ ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಕರೆ ನೀಡಿದ್ದಾರೆ. ಎಪ್ರಿಲ್ 23 ರವರೆಗೆ ಬಂದ್ ಮುಂದುವರಿಯಲಿದೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಂದೋಲನ ತೀವ್ರಗೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

