ಬದಿಯಡ್ಕ: ಜೀರ್ಣೋದ್ಧಾರಗೊಂಡ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನವು ಇಂದು ದೇವಸ್ಥಾನ ಹೇಗಿರಬೇಕೋ ಹಾಗೇ ಬದಲಾಗಿದೆ. ಬಹಳಷ್ಟು ಮಂದಿ ಊರು ಬಿಟ್ಟು ಹೊರಹೋಗಿದ್ದರೂ, ಉದನೇಶ್ವರನ ಮೂಲಕ ಭಕ್ತರು ಒಂದಾಗಿದ್ದಾರೆ. ಉದನೇಶ್ವರನ ಬಿಟ್ಟು ದೂರಹೋಗಿಲ್ಲ. ಜೀವನಕ್ಕೋಸ್ಕರ ಹೊರರಾಜ್ಯದಲ್ಲಿದ್ದರೂ ಅವರೆಲ್ಲರೂ ಉದನೇಶ್ವರನ ಭಕ್ತರಾಗಿಯೇ ಇದ್ದಾರೆ. ತುಂಬ ಚಂದದ ದೇವಸ್ಥಾನವಾಗಿ ಪೆರಡಾಲ ಬದಲಾಗಿದೆ. ಪೆರಡಾಲದ ಬ್ರಹ್ಮಕಲಶೋತ್ಸವದ ಬಗ್ಗೆ ಎಲ್ಲರ ಬಾಯಲ್ಲೂ ಅದ್ಭುತ ಎಂಬ ಮಾತು ಕೇಳಿಬರುತ್ತದೆ. ಅನೇಕ ಪರದೇಶಿಯರು ಬಂದು ಭಾರತವನ್ನು ಕೊಳ್ಳೆ ಹೊಡೆಯುತ್ತಿದ್ದರು. ಇಂದು ನಮ್ಮವರೇ ಉದ್ಯೋಗಕ್ಕಾಗಿ ಅನ್ಯದೇಶಕ್ಕೆ ತೆರಳುತ್ತಿದ್ದಾರೆ. ತಂತ್ರ, ಜ್ಯೋತಿಷ್ಯದಂತಹ ಹಲವಾರು ಪಾರಂಪರಿಕ ವಿದ್ಯೆಯ ಶ್ರೀಮಂತಿಕೆ ಇರುವ ಈ ನಾಡಿನ ಸ್ಥಿತಿ ಅಧೋಗತಿಯಾಗಬಾರದು. ಉದನೇಶ್ವರನ ಬಳಿ ಎಷ್ಟೇ ಕೆಟ್ಟವರಾದರೂ ಒಳ್ಳೆಯವರಾಗಿ ಪರಿವರ್ತಿತರಾಗುತ್ತಾರೆ ಎಂದು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭದ ನಟರಾಜ ವೇದಿಕೆಯಲ್ಲಿ ಭಾನುವಾರ ಅವರು ಆಶೀರ್ವಚನವನ್ನು ನೀಡಿ ಮಾತನಾಡಿದರು.
ಭಾವಾರ ಮಧ್ಯಾಹ್ನ ಶ್ರೀಕ್ಷೇತ್ರಕ್ಕೆ ಆಗಮಿಸಿದ ಶ್ರೀಗಳನ್ನು ಪೂರ್ಣಕುಂಭ, ಮುತ್ತುಕೊಡೆ, ಬೇಂಡುವಾದ್ಯಗಳೊಂದಿಗೆ ಸ್ವಾಗತಿಸಲಾಯಿತು. ಶ್ರೀದೇವರ ದರ್ಶನಗೈದ ಅವರು ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ಅವರೊಂದಿಗೆ ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನೆ ನಡೆಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಭಾ ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ, ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಪ್ರ.ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

