ವಿಶ್ವಸಂಸ್ಥೆ: ಪಶ್ಚಿಮ ಏಷ್ಯಾ ಸಂಘರ್ಷದ ಸಂದರ್ಭದಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡಿರುವುದು ಶೋಚನೀಯ ಸಂಗತಿಯಾಗಿದ್ದು, ಹೊರ್ಮುಜ್ ಜಲಸಂಧಿಯ ಮೂಲಕ ಮುಕ್ತ ಸಂಚಾರ ಸ್ವಾತಂತ್ರ್ಯ ಮತ್ತು ಜಾಗತಿಕ ವ್ಯಾಪಾರವನ್ನು ಆದಷ್ಟು ಬೇಗ ಮರುಸ್ಥಾಪಿಸಬೇಕು ಎಂದು ಭಾರತ ಒತ್ತಾಯಿಸಿದೆ.
'ಭಾರತಕ್ಕೆ ಬೇಕಾದ ತೈಲ ಮತ್ತು ಅನಿಲದ ಬಹುಪಾಲು ಪೂರೈಕೆಯು ಹೊರ್ಮುಜ್ ಜಲಸಂಧಿ ಮೂಲಕವೇ ಆಗುತ್ತದೆ. ಅಲ್ಲಿ ಏನಾದರೂ ಅಡಚಣೆಯಾದರೆ ಭಾರತದ ಆರ್ಥಿಕತೆ ಮತ್ತು ಇಂಧನ ವ್ಯವಸ್ಥೆಗೆ ತೊಂದರೆಯಾಗಬಹುದು ಎಂಬುದು ಸರ್ಕಾರದ ಆತಂಕವಾಗಿದೆ' ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಆಗಿರುವ ಪರ್ವತನೇನಿ ಹರೀಶ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗುರುವಾರ ತಿಳಿಸಿದ್ದಾರೆ.
'ಈ ಸಂಘರ್ಷದಲ್ಲಿ ವಾಣಿಜ್ಯ ಹಡಗುಗಳನ್ನು ಸೇನಾ ದಾಳಿಯ ಗುರಿಯನ್ನಾಗಿ ಮಾಡಿರುವುದನ್ನು ಭಾರತವು ಖಂಡಿಸಿದೆ' ಎಂದು ಪರ್ವತನೇನಿ ಹೇಳಿದ್ದಾರೆ.
'ಮುಗ್ಧ ನಾಗರಿಕ ಸಿಬ್ಬಂದಿಗೆ ಅಪಾಯವನ್ನು ಉಂಟುಮಾಡುವುದು ಅಥವಾ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮುಕ್ತ ಸಂಚಾರ ಮತ್ತು ವ್ಯಾಪಾರದ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದು ಸ್ವೀಕಾರಾರ್ಹ ಕ್ರಮವಲ್ಲ. ಹೀಗಾಗಿ, ಅಂತರರಾಷ್ಟ್ರೀಯ ಕಾನೂನನ್ನು ಎಲ್ಲರೂ ಗೌರವಿಸಬೇಕು' ಎಂದು ಹೇಳಿದ್ದಾರೆ.
ಸಂಘರ್ಷದ ಸಮಯದಲ್ಲಿ ಹಡಗುಗಳಲ್ಲಿದ್ದ ಭಾರತೀಯ ನಾವಿಕರು ಮೃತಪಟ್ಟಿರುವ ಕುರಿತೂ ಕಳವಳ ವ್ಯಕ್ತಪಡಿಸಿದ್ದಾರೆ.
ಹೊರ್ಮಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ಈ ತಿಂಗಳ ಆರಂಭದಲ್ಲಿ ಬಹರೇನ್ ನೇತೃತ್ವದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾದ ನಿರ್ಣಯವನ್ನು ರಷ್ಯಾ ಮತ್ತು ಚೀನಾ ತಮ್ಮ ವೀಟೊ ಅಧಿಕಾರವನ್ನು ಬಳಸಿ ತಡೆಹಿಡಿದ್ದವು. ಹೀಗಾಗಿ, ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಚರ್ಚೆಯಲ್ಲಿ ಪರ್ವತನೇನಿ ಅವರು ಮಾತನಾಡಿದ್ದಾರೆ.
ಈ ವರ್ಷದ ಫೆಬ್ರುವರಿ 28ರಿಂದ ಇರಾನ್ ಮತ್ತು ಕೊಲ್ಲಿ ಪ್ರದೇಶದಲ್ಲಿ ಸಂಘರ್ಷ ಆರಂಭವಾದಾಗಿನಿಂದ, ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದೆ. ಎಲ್ಲ ರಾಷ್ಟ್ರಗಳು ಸಂಯಮ ಕಾಯ್ದುಕೊಳ್ಳುವಂತೆ, ಉದ್ವಿಗ್ನತೆಯನ್ನು ಹೆಚ್ಚಿಸದಂತೆ ಹಾಗೂ ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದೆ ಎಂದು ಪರ್ವತನೇನಿ ತಿಳಿಸಿದ್ದಾರೆ.

