ಕೋಝಿಕ್ಕೋಡ್: ಕೇರಳದ ಆಡಳಿತರೂಢ ಎಡಪಕ್ಷಗಳ ಮೈತ್ರಿಕೂಟವು (ಎಲ್ಡಿಎಫ್) ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆಗೊಳಿಸಿದೆ.
ರಾಜ್ಯದ ಜನರ ಜೀವನವನ್ನು ಬದಲಾಯಿಸುವ ನಿಟ್ಟಿನಲ್ಲಿ ಕಲ್ಯಾಣ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಬಡತನವನ್ನು ಸಂಪೂರ್ಣವಾಗಿ ಮುಕ್ತಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಪಿಂಚಣಿಯನ್ನು ಮಾಸಿಕ ₹3 ಸಾವಿರಕ್ಕೆ ಏರಿಕೆ ಮಾಡಲಾಗುವುದು ಎಂದು ತಿಳಿಸಿದ್ದು, ಸ್ಥಳೀಯ ಮಟ್ಟದಿಂದಲೇ ಸರಿಯಾದ ಆರೋಗ್ಯ ರಕ್ಷಣೆ ಹಾಗೂ ಬೆಂಬಲ ವ್ಯವಸ್ಥೆಯನ್ನು ಸುಧಾರಿಸಲಾಗುವುದು ಎಂದು ಭರವಸೆ ನೀಡಲಾಗಿದೆ.
ರಾಜ್ಯದಲ್ಲಿ ಕಡುಬಡತನವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಗಿದೆ ಎಂದು ಎಡಪಕ್ಷ ಸರ್ಕಾರವು ಇತ್ತೀಚಿಗೆ ಘೋಷಿಸಿ, ಪಿಂಚಣಿಯನ್ನು ಮಾಸಿಕ ₹1,600 ರಿಂದ ₹2ಸಾವಿರಕ್ಕೆ ಏರಿಕೆ ಮಾಡಿತ್ತು.
ರಾಜ್ಯದಲ್ಲಿರುವ ಬಡತನ ಹೊಂದಿರುವ ಐದು ಲಕ್ಷ ಕುಟುಂಬಗಳನ್ನು ಗುರುತಿಸಿ, ಅವರನ್ನು ಮೇಲಕ್ಕೆತ್ತಲು ಸರ್ಕಾರ ನೆರವು ನೀಡಲಿದೆ ಎಂದು ಎಲ್ಡಿಎಫ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಪರಿಶಿಷ್ಟ ಜಾತಿ, ಮೀನುಗಾರರು ಹಾಗೂ ಅಂತ್ಯೋದಯ ಗುಂಪಿನಲ್ಲಿರುವ ಜನರ ವಿಚಾರದಲ್ಲಿ ವಿಶೇಷ ಗಮನ ನೀಡುವ ಜೊತೆಗೆ ವೃದ್ಧರು ಹಾಗೂ ಹಾಸಿಗೆ ಹಿಡಿದ ರೋಗಿಗಳಿಗೆ ಒಳ್ಳೆಯ ಆರೈಕೆ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದೆ.
ಯುವಜನರನ್ನು ಗಮನದಲ್ಲಿರಿಸಿಕೊಂಡು ಉದ್ಯೋಗ ಸೃಷ್ಟಿಯ ಭರವಸೆ ನೀಡಲಾಗಿದೆ. ಅಧ್ಯಯನ ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಮೂಲಕ ಉದ್ಯೋಗದ ಅವಕಾಶ ಹಾಗೂ ಕೌಶಲ ತರಬೇತಿಯನ್ನು ವಿಸ್ತರಣೆಗೊಳಿಸಲಾಗುವುದು ಎಂದು ಹೇಳಿದೆ.
ಮಹಿಳೆಯರಿಗೆ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಭರವಸೆ ನೀಡಲಾಗಿದೆ. ಉದ್ಯೋಗದ ಸ್ಥಳದಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣವನ್ನು ಶೇಕಡ 50ರಷ್ಟು ಏರಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಅಗತ್ಯವಾದ ಸುರಕ್ಷಿತ ಪ್ರಯಾಣ, ಮಕ್ಕಳ ಆರೈಕೆ, ಕೌಶಲ ತರಬೇತಿಯ ಮೂಲಕ ಮಹಿಳೆಯರು ಉದ್ಯೋಗ ಪಡೆಯುವ ಅವಕಾಶ ಹೆಚ್ಚಿಸಲಾಗುವುದು ಎಂದು ವಾಗ್ದಾನ ನೀಡಿದೆ.
ಕೈಗಾರೀಕರಣಕ್ಕೆ ಆದ್ಯತೆ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದ್ದು, ಮುಂದಿನ ಐದು ವರ್ಷದಲ್ಲಿ ರಾಜ್ಯಕ್ಕೆ ₹2 ಲಕ್ಷ ಕೋಟಿ ಬಂಡವಾಳ ಆಕರ್ಷಿಸಲಾಗುವುದು. ಹೊಸ ಕೈಗಾರಿಕಾ ಕಾರಿಡಾರ್ನ ಜೊತೆಗೆ ನಾವೀನ್ಯತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದೆ.
140 ವಿಧಾನಸಭಾ ಕ್ಷೇತ್ರ ಹೊಂದಿರುವ ಕೇರಳ ವಿಧಾನಸಭೆಗೆ ಇದೇ ಏಪ್ರಿಲ್ 10ರಂದು ಮತದಾನ ನಡೆಯಲಿದೆ.

