ನವದೆಹಲಿ: ಕಳೆದ ವರ್ಷ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ದಕ್ಷಿಣ ಕಮಾಂಡ್ ಅನ್ನು ಮುನ್ನಡೆಸಿದ್ದ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ಭಾರತೀಯ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಬುಧವಾರ ಇಲ್ಲಿ ಅಧಿಕಾರ ಸ್ವೀಕರಿಸಿದರು.
ಸೌತ್ ಬ್ಲಾಕ್ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡ ಧೀರಜ್ ಅವರು ಹಿರಿಯ ಸೇನಾಧಿಕಾರಿಗಳಿಂದ ಗೌರವ ರಕ್ಷೆ ಸ್ವೀಕರಿಸಿದರು.
ಲೆಫ್ಟಿನೆಂಟ್ ಜನರಲ್ ಪುಷ್ಪೇಂದ್ರ ಸಿಂಗ್ ಅವರಿಂದ ತೆರವಾದ ಸ್ಥಾನಕ್ಕೆ ಧೀರಜ್ ಅವರನ್ನು ನೇಮಕ ಮಾಡಲಾಗಿದೆ.
ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ಜುಲೈ 1, 2024 ರಿಂದ ಈ ವರ್ಷದ ಮಾರ್ಚ್ 31ರವರೆಗೆ ದಕ್ಷಿಣ ಕಮಾಂಡ್ನ 51ನೇ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದಾರೆ.
ಕಳೆದ ವರ್ಷ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ನಂತರದ ನಿರ್ಣಾಯಕ ಮಿಲಿಟರಿ ಕಾರ್ಯಾಚರಣೆ 'ಆಪರೇಷನ್ ಸಿಂಧೂರ'ದಲ್ಲಿ ದಕ್ಷಿಣ ಕಮಾಂಡ್ ಅನ್ನು ಸೇಠ್ ಮುನ್ನಡೆಸಿದ್ದರು.
ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ಡಿಎ) ಮತ್ತು ಡೆಹ್ರಾಡೂನ್ನ ಭಾರತೀಯ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಧೀರಜ್ ಅವರನ್ನು 1986ರ ಡಿಸೆಂಬರ್ 20ರಂದು ಎರಡನೇ ಲ್ಯಾನ್ಸರ್ಸ್ಗೆ ನಿಯೋಜಿಸಲಾಯಿತು. ನಂತರ ಸೇಠ್ ಅವರು, ಸ್ಕಿನ್ನರ್ಸ್ ಹಾರ್ಸ್, 98 ಆರ್ಮ್ಡ್ ಬ್ರಿಗೇಡ್, ಕೌಂಟರ್ ಇನ್ಸರ್ಜೆನ್ಸಿ ಯೂನಿಫಾರ್ಮ್ ಫೋರ್ಸ್, 21 ಕಾರ್ಪ್ಸ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

