ನವದೆಹಲಿ: ಅನಗತ್ಯ ದಾವೆಗಳನ್ನು ಹೂಡುತ್ತಿರುವುದಕ್ಕಾಗಿ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆ ತೆಗೆದುಕೊಂಡಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ₹25,000 ದಂಡ ವಿಧಿಸಿದೆ.
ಕರ್ತವ್ಯಕ್ಕೆ ಹಾಜರಾಗದ ಆರೋಪ ಹಾಗೂ ಮಹಿಳೆಯೊಬ್ಬರ ಪ್ರೇಮ ವಿವಾಹದಲ್ಲಿ ಪಿತೂರಿ ರೂಪಿಸಿದ್ದ ಆರೋಪದಲ್ಲಿ ಸಿಐಎಸ್ಎಫ್ ಅಧಿಕಾರಿಯೊಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ, ಅಧಿಕಾರಿಯ ಲೋಪವಿಲ್ಲ ಎಂದು ತಿಳಿದ ಬಳಿಕ ಅವರನ್ನು ವಜಾಗೊಳಿಸಿದ್ದ ಆದೇಶವನ್ನು ರದ್ದುಗೊಳಿಸಿತ್ತು.
ಹೈಕೋರ್ಟ್ನ ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ ಕೇಂದ್ರ ಸರ್ಕಾರವನ್ನು ಪೀಠ ತರಾಟೆ ತೆಗೆದುಕೊಂಡಿದ್ದು, 'ಹೈಕೋರ್ಟ್ನ ವಿಭಾಗೀಯ ಪೀಠದಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕವೂ ಏಕೆ ಅನಗತ್ಯವಾಗಿ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಲಾಗಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ ಎಂದು ನಾವು ಹೇಳುತ್ತೇವೆ. ಆದರೆ, ಅತಿದೊಡ್ಡ ದಾವೆದಾರ ಯಾರು? ಅವರಿಗೆ ದಂಡ ವಿಧಿಸಲೇಬೇಕು' ಎಂದಿತು.
'ಜತೆಗೆ ನ್ಯಾಯಾಲಯಕ್ಕೆ ಬರುವುದು ಎಂದರೆ ಯಾವುದೋ ರೆಸಾರ್ಟ್ಗೆ ಹೋಗಿ ಬಂದಂತಲ್ಲ. ಅರ್ಜಿಗಳನ್ನು ಆಲಿಸಲು ನಾವೂ ಸಿದ್ಧತೆ ಮಾಡಿಕೊಂಡಿರುತ್ತೇವೆ, ಅಧ್ಯಯನ ಮಾಡಿಕೊಂಡು ಬಂದಿರುತ್ತೇವೆ. ಅವುಗಳನ್ನೆಲ್ಲಾ ಮರೆಯಬಾರದು' ಎಂದೂ ನ್ಯಾಯಪೀಠ ಎಚ್ಚರಿಕೆ ನೀಡಿದೆ.

