ನವದೆಹಲಿ: 'ನನ್ನನ್ನು ಪ್ರಶ್ನಿಸುವವರಿಗೆ ನನ್ನ ಕೆಲಸವೇ ಉತ್ತರವಾಗಲಿದೆ' ಎಂದು ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಹೇಳಿದ್ದಾರೆ.
ಈ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ 'ವಾಯ್ಸ್ ರೈಸ್ಡ್ ಪ್ರೈಸ್ ಪೇಯ್ಡ್' ಶೀರ್ಷಿಕೆಯಡಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ನನ್ನ ಸಂಸದೀಯ ಕಾರ್ಯಕ್ಷಮತೆಯನ್ನು ಪ್ರಶ್ನಿಸುವವರಿಗೆ, ನನ್ನ ಕೆಲಸವೇ ಉತ್ತರವಾಗಲಿದೆ' ಎಂದು ಬರೆದುಕೊಂಡಿದ್ದಾರೆ.
'ನಾನು ಸಂಸತ್ತಿಗೆ ಹೋಗುವುದು ಜನರ ಸಮಸ್ಯೆಗಳ ಪರ ಧ್ವನಿ ಎತ್ತುವುದಕ್ಕೆ ಹೊರತು, ಗದ್ದಲ ಸೃಷ್ಟಿಸುವುದಕ್ಕಲ್ಲ ಎಂದು ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಇತ್ತೀಚೆಗೆ ಗುಡುಗಿದ್ದರು.
ಸಂಸತ್ತಿನಲ್ಲಿ ಜಿಎಸ್ಟಿ, ಆದಾಯ ತೆರಿಗೆ, ದೆಹಲಿಯಲ್ಲಿ ವಾಯು ಮಾಲಿನ್ಯ, ಪಂಜಾಬ್ನಲ್ಲಿ ನೀರಿನ ಕಾಳಜಿ, ಸಾರ್ವಜನಿಕ ಆರೋಗ್ಯ ರಕ್ಷಣೆ, ಶಿಕ್ಷಣ, ರೈಲ್ವೆ ಪ್ರಯಾಣಿಕರ ಸಮಸ್ಯೆಗಳು, ಮುಟ್ಟಿನ ಆರೋಗ್ಯ, ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಾರ್ವಜನಿಕ ಸಮಸ್ಯೆಗಳತ್ತ ಧ್ವನಿ ಎತ್ತುವತ್ತ ನನ್ನ ಗಮನವಿದೆ ಎಂದು ಛಡ್ಡಾ ತಿಳಿಸಿದ್ದರು.
ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಅವರನ್ನು ಕೆಳಗಿಳಿಸಿದ ಬೆನ್ನಲ್ಲೇ, ಆಮ್ ಆದ್ಮಿ ಪಕ್ಷವು (ಎಎಪಿ) ಛಡ್ಡಾ ವಿರುದ್ಧ ವಾಗ್ದಾಳಿ ನಡೆಸಿತ್ತು.

