ನವದೆಹಲಿ: ಆರ್ಎಸ್ಎಸ್ ನೂರನೇ ವರ್ಷಾಚರಣೆಯ ಕಾರ್ಯಕ್ರಮವನ್ನು ತಮ್ಮ ವಿಶ್ವವಿದ್ಯಾಲಯದಲ್ಲಿ ನಡೆಸುವುದನ್ನು ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ದೆಹಲಿ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆಯ ಭಾರಿ ಭದ್ರತೆಯ ನಡುವೆಯೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, 'ಜಾಮಿಯಾ ವಿಶ್ವವಿದ್ಯಾಲಯ ನಮ್ಮದು, ನಿಮ್ಮ ಶಾಖೆಯಲ್ಲ', 'ನಮ್ಮ ಕ್ಯಾಂಪಸ್ ಕೇಸರೀಕರಣಕ್ಕೆ ವಿರೋಧ' ಎಂದು ಬರೆದ ಭಿತ್ತಿಪತ್ರವನ್ನು ಪ್ರದರ್ಶಿಸಿ 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆ ಮೊಳಗಿಸಿದ್ದಾರೆ.
'ವಿಶ್ವವಿದ್ಯಾಲಯದ ಹಲವಾರು ಪ್ರವೇಶದ್ವಾರಗಳಲ್ಲಿ ಒಂದರ ಮೂಲಕ ಆರ್ಎಸ್ಎಸ್ ತನ್ನ ಮುಖ್ಯ ಅತಿಥಿಯನ್ನು ಕರೆತರಲು ಪ್ರಯತ್ನಿಸುತ್ತಿದೆ. ಆದರೆ ನಾವು ಸಭಾಗಂಣದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದೇವೆ' ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ತಾಪಮಾನ ಹೆಚ್ಚಿದ್ದರೂ ಪ್ರತಿಭಟನಾನಿರತ ವಿದ್ಯಾರ್ಥಿಗಳು ಬಿಸಿಲನ್ನು ಸಹಿಸಿ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ದೆಹಲಿ ವಿಶ್ವದ್ಯಾಲಯದ ಕಾಲೇಜುಗಳು ಆರ್ಎಸ್ಎಸ್ ಸಂಬಂಧಿತ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಕಾರಣ ಜಾಮಿಯಾದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಇದಕ್ಕೆ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಘಟನೆಗಳಿಂದ ಟೀಕೆ ವ್ಯಕ್ತವಾಗಿದೆ.
ನೇರ ಪ್ರಚೋದನೆ: ಎಸ್ಎಫ್ಐ ವಿಶ್ವವಿದ್ಯಾಲಯದಲ್ಲಿ ಆರ್ಎಸ್ಎಸ್ ಕಾರ್ಯಕ್ರಮ ನಡೆಸುವುನ್ನು 'ನೇರ ಪ್ರಚೋದನೆ' ಎಂದು ಕರೆದಿರುವ ಎಸ್ಎಫ್ಐ ಜಾಮಿಯ ಘಟಕ ಕಾರ್ಯಕ್ರಮ ನಡೆಸುವುದಕ್ಕೆ ಒಂದು ದಿನ ಮೊದಲೇ ಆಕ್ಷೇಪಣೆ ಸಲ್ಲಿಸಿತ್ತು. ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಾದ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಮತ್ತು ಅಖಿಲ ಭಾರತ ವಿರ್ದ್ಯಾರ್ಥಿ ಅಸೋಸಿಯೇಷನ್ನ (ಎಐಎಸ್ಎ) ಪ್ರತಿಭಟನಕಾರರು ಅಲ್ಲಿದ್ದ ಆರ್ಎಸ್ಎಸ್ ಕಾರ್ಯಕರ್ತರಿಗೆ ವಿಶ್ವವಿದ್ಯಾಲಯದ ಆವರಣದಿಂದ ತಕ್ಷಣವೆ ಹೊರಹೋಗುವಂತೆ ಕೇಳಿಕೊಂಡಿದ್ದಾರೆ.

