ನ್ಯೂಯಾರ್ಕ್: ಜಗತ್ತಿನ ಶ್ರೀಮಂತ ನಗರಿ ನ್ಯೂಯಾರ್ಕ್ ನಗರದ ಮೇಯರ್ ಆಗಿರುವ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಅವರು ಒಂದಿಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಾಗುತ್ತಿದ್ದಾರೆ.
ಮೊನ್ನೆಯೂ ಹೀಗೆ ಆಗಿದ್ದು. 9/11 ಉಗ್ರ ದಾಳಿಯ ಸಂತ್ರಸ್ತರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ತಮ್ಮ ಪತ್ನಿ ಕೆಮಿಲ್ಲಾ ಅವರೊಂದಿಗೆ ನ್ಯೂಯಾರ್ಕ್ ನಗರಕ್ಕೆ ಆಗಮಿಸಿದ್ದರು.
ಈ ವೇಳೆ ಪರ್ಯಾಯ ಸ್ಥಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 'ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕರೆ, ಭಾರತಕ್ಕೆ ಕೊಹಿನೂರ್ ವಜ್ರವನ್ನು ಹಿಂದಿರುಗಿಸುವಂತೆ ಕೇಳುತ್ತೇನೆ' ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಈ ಬಗ್ಗೆ ಅಮೆರಿಕದಲ್ಲಿ ಮಮ್ದಾನಿ ವಿರುದ್ಧ ವಿರೋಧ ವ್ಯಕ್ತವಾಗಿದೆ. ಅನೇಕ ಪತ್ರಿಕೆಗಳು ಮಮ್ದಾನಿ ವಿರುದ್ಧ ಲೇಖನಗಳನ್ನು ಪ್ರಕಟಿಸಿವೆ.
ಬ್ರಿಟನ್ ದೊರೆ ನಗರಕ್ಕೆ ಬಂದಾಗ ಹೇಗೆ ನಡೆದುಕೊಳ್ಳಬೇಕೆಂದು ಮೇಯರ್ ಮರೆತಿದ್ದರು. ಅವರು ಸ್ವಲ್ಪ ಪ್ರಬುದ್ಧವಾಗಿ ಔದಾರ್ಯದಿಂದ ವರ್ತಿಸಬೇಕಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಲೇಖನ ಪ್ರಕಟಿಸಿದೆ.
ಮಮ್ದಾನಿ ವಸಾಹತುಶಾಹಿ ವಿರೋಧಿ ಗೀಳಿನಿಂದ ವರ್ತಿಸಿದ್ದಾರೆ. ಬ್ರಿಟನ್ ರಾಜನನ್ನು ಸ್ವಾಗತಿಸಿದ ರೀತಿ ಸರಿ ಇರಲಿಲ್ಲ. ಈ ಹಿಂದೆ ಬ್ರಿಟನ್ ದೊರೆಗಳು ನಗರಕ್ಕೆ ಬಂದಾಗ ಮೇಯರ್ಗಳು ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನು ಸ್ವಲ್ಪ ತಿಳಿದುಕೊಳ್ಳಲಿ ಎಂದು ಕಿವಿಹಿಂಡಿದೆ.
ಒಬ್ಬ ಮೇಯರ್ ಆಗಿ ಮಮ್ದಾನಿ ಅವರು ಸಲ್ಲದ ವಿಚಾರವನ್ನು ಸಲ್ಲದ ವೇದಿಕೆಯಲ್ಲಿ ಎತ್ತಲು ಅವರೇನು ಭಾರತದ ವಕ್ತಾರರೇ ಎಂದು ಪ್ರಶ್ನಿಸಿದೆ. ಅವರಿಗಿನ್ನು ಸಮಯವಿದೆ. ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬಹುದೇನೊ ಎಂದು ಪತ್ರಿಕೆ ಮಮ್ದಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಆದರೆ, ಈ ಬಗ್ಗೆ ಮಮ್ದಾನಿ ಪ್ರತಿಕ್ರಿಯಿಸಿಲ್ಲ.
'105 ಕ್ಯಾರೆಟ್ ತೂಕದ ಕೊಹಿನೂರ್ ವಜ್ರವನ್ನು ಬ್ರಿಟನ್ ಹಿಂತಿರುಗಿಸಬೇಕು' ಎಂದು ಭಾರತ ಈ ಹಿಂದೆಯೂ ಹಲವಾರು ಬಾರಿ ಒತ್ತಾಯಿಸಿದೆ.
1849ರಲ್ಲಿ ಪಂಜಾಬ್ ರಾಜರು ಮತ್ತು ಈಸ್ಟ್ ಇಂಡಿಯಾ ಕಂಪನಿಯ ಮಧ್ಯೆ ನಡೆದ ಒಪ್ಪಂದದಲ್ಲಿ ಕೊಹಿನೂರ್ ವಜ್ರವನ್ನು ಈಸ್ಟ್ ಇಂಡಿಯಾ ಕಂಪನಿಗೆ ನೀಡಲಾಯಿತು. ಕಂಪನಿಯು ಅದನ್ನು ಬ್ರಿಟನ್ ರಾಣಿ ವಿಕ್ಟೋರಿಯಾಗೆ ಉಡುಗೊರೆಯಾಗಿ ನೀಡಿತು. ಅಂದಿನಿಂದ, ಬ್ರಿಟನ್ ರಾಣಿಯರಾದ ವಿಕ್ಟೋರಿಯಾ, ಅಲೆಕ್ಸಾಂಡ್ರಾ, ಮೇರಿ, ಎಲಿಜಬೆತ್ ಮತ್ತು ಎರಡನೇ ಎಲಿಜಬೆತ್ ಅವರು ಈ ವಜ್ರವನ್ನು ಬಳಸಿದ್ದಾರೆ.

