ಲಖನೌ: ಈದ್ ಉಲ್ ಅದಾ (ಬಕ್ರೀದ್) ಸಂಭ್ರಮಕ್ಕೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಿನಲ್ಲಿ ಗೋವನ್ನು 'ರಾಷ್ಟ್ರೀಯ ಪ್ರಾಣಿ' ಎಂದು ಘೋಷಿಸುವಂತೆ ಹಲವು ಮುಸ್ಲಿಂ ಸಂಘಟನೆಗಳು ಬೇಡಿಕೆ ಇಟ್ಟಿವೆ.
ಜಮೈತ್ ಉಲ್ಮಾ ಎ ಹಿಂದ್ (ಅರ್ಷದ್ ಮದನಿ ಬಣ) ಸಂಘಟನೆ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ನೇತೃತ್ವದಲ್ಲಿ ಹಲವು ಸಂಘಟನೆಗಳು ಒಗ್ಗೂಡಿವೆ.
ಮುಸ್ಲಿಮರ ಮೇಲೆ ಆಗುತ್ತಿರುವ ರಾಜಕೀಯ ಶೋಷಣೆ, ಗುಂಪು ದಾಳಿ, ಹತ್ಯೆ ಮತ್ತು ಇತರ ದೌರ್ಜನ್ಯಗಳನ್ನು ಕೊನೆಗೊಳಿಸಲು ಈ ನಿರ್ಧಾರದಿಂದ ಸಾಧ್ಯವಾಗಲಿದೆ ಎಂಬುದು ಸಂಘಟನೆಗಳ ಆಶಯ.
ಈ ನಿರ್ಧಾರದ ಬಗ್ಗೆ ಸಮುದಾಯದವರಲ್ಲಿ ಸಹಮತ ಮೂಡಿಸುವ ಕೆಲಸದಲ್ಲಿ ಸಂಘಟನೆಗಳ ಹಲವರು ನಿರತರಾಗಿದ್ದಾರೆ. ಮತ್ತಷ್ಟು ಮಂದಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ದೇಶದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಸಂಖ್ಯೆಯೂ ಗಣನೀಯವಾಗಿದೆ. ಹಿಂದೂ ಪರ ಸಂಘಟನೆಗಳು ಈ ಹಿಂದೆ ಇಂತಹ ಬೇಡಿಕೆ ಇಟ್ಟಿದ್ದವು. ಇದೀಗ, ಮುಸ್ಲಿಮರೂ ಈ ವಿಚಾರ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ 2027ಕ್ಕೆ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ 'ರಾಷ್ಟ್ರೀಯ ಪ್ರಾಣಿ' ಬೇಡಿಕೆ ಮಹತ್ವ ಪಡೆದುಕೊಂಡಿದೆ.
'ಗೋವನ್ನು 'ರಾಷ್ಟ್ರೀಯ ಪ್ರಾಣಿ'ಯನ್ನಾಗಿಸಬೇಕು ಎಂಬ ಮದನಿ ಅವರ ಬೇಡಿಕೆಗೆ ಸಂಪೂರ್ಣ ಬೆಂಬಲವಿದೆ' ಎಂದು ಆಲ್ ಇಂಡಿಯಾ ಮುಸ್ಲಿಂ ಜಮಾತ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಶಹಾಬುದ್ದೀನ್ ರಿಝ್ವಿ ಹೇಳಿದ್ದಾರೆ. ಈ ಬೇಡಿಕೆಯನ್ನು ಈಡೇರಿಸುವುದರಿಂದ, ದೇಶದಾದ್ಯಂತ ಗೋಹತ್ಯೆಗೆ ಸಂಬಂಧಿಸಿದಂತೆ ನೀತಿಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಆಲ್ ಇಂಡಿಯಾ ಕುರೇಷಿ ಜಮಾತ್, ಆಲ್ ಇಂಡಿಯಾ ಶಿಯಾ ವೈಯಕ್ತಿಕ ಕಾನೂನು ಮಂಡಳಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಸೇರಿದಂತೆ ಹಲವು ಸಂಘಟನೆಗಳು ಜಮೈತ್ ಉಲ್ಮಾ ಎ ಹಿಂದ್ ಬೇಡಿಕೆಗೆ ಬಂಬಲ ಸೂಚಿಸಿವೆ.
- ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಹಿರಿಯ ಕಾರ್ಯಕಾರಿ ಸದಸ್ಯನಮ್ಮು ಹಿಂದೂ ಸಹೋದರರು ಗೋವಿನ ಬಗ್ಗೆ ಧಾರ್ಮಿಕ ಭಾವನೆಗಳನ್ನು ಹೊಂದಿದ್ದಾರೆ. ಅವರ ಭಾವನೆಗಳಿಗೆ ಗೌರವ ನೀಡಿ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು. ಗೋ ಹತ್ಯೆಗೆ ಸಂಬಂಧಿಸಿದಂತೆ ದೇಶದಾದ್ಯಂತ ಏಕರೂಪದ ಕಾನೂನು ಜಾರಿಯಾಗಬೇಕು.

