ನವದೆಹಲಿ: ತಾಂತ್ರಿಕ ದೋಷಗಳ ಕಾರಣದಿಂದಾಗಿ ಫಲಿತಾಂಶದ ನಂತರದ ಪ್ರಕ್ರಿಯೆಗಳಿಗೆ 12ನೇ ತರಗತಿ ವಿದ್ಯಾರ್ಥಿಗಳು ಪಾವತಿಸಿದ್ದ ಹೆಚ್ಚುವರಿ ಶುಲ್ಕವನ್ನು ಶೀಘ್ರವೇ ಹಿಂದಿರುಗಿಸುವುದಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಭಾನುವಾರ ತಿಳಿಸಿದೆ.
ಮರು ಮೌಲ್ಯಮಾಪನ ಸಂಬಂಧಿತ ಪ್ರಕ್ರಿಯೆಗಳ ವೇಳೆ ತಾಂತ್ರಿಕ ಸಮಸ್ಯೆಗಳು ಎದುರಾದ ಸಂಬಂಧ ವಿದ್ಯಾರ್ಥಿಗಳಿಂದ ದೂರುಗಳು ಕೇಳಿ ಬಂದಿದ್ದವು.
ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವರದಿ ನೀಡುವಂತೆ ಸಿಬಿಎಸ್ಇಗೆ ಸೂಚಿಸಿದ್ದರು. ಇದಾದ ಒಂದು ದಿನದ ನಂತರ ಶುಲ್ಕ ಮರುಪಾವತಿ ಹೇಳಿಕೆ ಹೊರಬಿದ್ದಿದೆ.
ಮೌಲ್ಯಮಾಪನ ಮಾಡಲಾದ ಉತ್ತರ ಪತ್ರಿಕೆಗಳ ಸ್ಕ್ಯಾನ್ ಕಾಪಿಗಳಿಗಾಗಿ ವಿದ್ಯಾರ್ಥಿಗಳು ಮೇ 21 ಮತ್ತು 22ರಂದು ಅರ್ಜಿ ಸಲ್ಲಿಸಿದ ವೇಳೆ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ಕೆಲವರು ಹೆಚ್ಚುವರಿ ಶುಲ್ಕ ಪಾವತಿಸುವಂತಾಗಿತ್ತು ಎಂದು ಸಿಬಿಎಸ್ಇ ಹೇಳಿಕೆ ಬಿಡುಗಡೆ ಮಾಡಿದೆ.
'ಕೆಲವರು ಹೆಚ್ಚುವರಿ ಹಣ ಪಾವತಿಸಿದ್ದಾರೆ. ಇನ್ನು ಕೆಲವರಿಗೆ ಕಡಿಮೆ ಮೊತ್ತವನ್ನು ಭರಿಸಿದ್ದಾರೆ. ತಾಂತ್ರಿಕ ದೋಷದಿಂದ ಹೀಗಾಗಿದೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
'ಶುಲ್ಕ ಪಾವತಿಗೆ ಅನುಸರಿಸಿದ್ದ ವಿಧಾನದಲ್ಲೇ ಹೆಚ್ಚುವರಿ ಹಣವನ್ನು ಹಿಂತಿರುಗಿಸಲಾಗುವುದು. ಅದೇ ರೀತಿ, ಅಗತ್ಯಬಿದ್ದರೆ, ಕಡಿಮೆ ಮೊತ್ತ ಪಾವತಿಸಿರುವ ವಿದ್ಯಾರ್ಥಿಗಳಿಗೆ ಬಾಕಿ ಮೊತ್ತ ಭರಿಸುವಂತೆ ಸೂಚಿಸಲಾಗುವುದು' ಎಂದೂ ತಿಳಿಸಲಾಗಿದೆ.
ಮೌಲ್ಯಮಾಪನ ಮಾಡಲಾದ ಉತ್ತರ ಪತ್ರಿಕೆಗಳ ಸ್ಕ್ಯಾನ್ ಕಾಪಿಗಳಿಗಾಗಿ ವಿದ್ಯಾರ್ಥಿಗಳು ಮತ್ತೊಮ್ಮೆ ಮನವಿ ಸಲ್ಲಿಸುವ ಅಗತ್ಯವಿಲ್ಲ ಎಂಬುದಾಗಿಯೂ ಸ್ಪಷ್ಟಪಡಿಸಿದೆ.

