ನವದೆಹಲಿ: ದೆಹಲಿಯ ಕೆಂಪುಕೋಟೆ ಸಮೀಪ ಕಾರು ಸ್ಫೋಟ ಪ್ರಕರಣದ ಆರೋಪಿಯೊಬ್ಬ ಭಯೋತ್ಪಾದನೆಗಾಗಿ ಕೃತಕ ಬುದ್ಧಿಮತ್ತೆ (ಎ.ಐ) ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿರುವುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪತ್ತೆ ಹಚ್ಚಿದೆ.
ಕಳೆದ ವರ್ಷ ನವೆಂಬರ್ 10ರಂದು ನಡೆದಿದ್ದ ಸ್ಫೋಟ ಪ್ರಕರಣ ಸಂಬಂಧ ತನಿಖಾ ಸಂಸ್ಥೆಯು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಮೇ 14ರಂದು ಸಲ್ಲಿಸಿದ 7,500 ಪುಟಗಳ ಆರೋಪಪಟ್ಟಿಯಲ್ಲಿ ಈ ಅಂಶಗಳ ಬಗ್ಗೆ ವಿವರಿಸಲಾಗಿದೆ.
ದೋಷಾರೋಪ ಪಟ್ಟಿಯಲ್ಲಿ ಹೆಸರಿಸಿರುವ ಆರೋಪಿಯೊಬ್ಬ 'ಅಲ್-ಕೈದಾ' ಸಂಘಟನೆಗೆ ಸೇರಿದ 'ಅನ್ಸಾರ್ ಗಜ್ವತ್- ಉಲ್- ಹಿಂದ್'ನ ಎಂಜಿನಿಯರ್ ಆಗಿದ್ದ ಎನ್ನುವುದು ಗೊತ್ತಾಗಿದೆ. ಎಕ್ಯುಐಎಸ್ ಮತ್ತು ಅದರ ಅಂಗಸಂಸ್ಥೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಗೃಹ ಸಚಿವಾಲಯ ಘೋಷಿಸಿದೆ.
ಆರೋಪಿಗಳು ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಕಾಜಿಗುಂಡ್ ಅರಣ್ಯದಲ್ಲಿ ಕಚ್ಚಾ ಬಾಂಬ್ (ಐಇಡಿ) ತಯಾರಿಸಿ ಪರೀಕ್ಷಿಸಿದ್ದಾರೆ. ಅಲ್ಲದೆ, ಇವುಗಳನ್ನು ತಯಾರಿಸಲು, ಬಳಸಲು ಅಳವಡಿಸಿಕೊಂಡಿದ್ದ ಅತ್ಯಂತ ನಿಖರವಾದ ಹಾಗೂ ಬಹುತೇಕ ಪ್ರಯೋಗಾಲಯ ಮಟ್ಟದ ವ್ಯವಸ್ಥಿತ ವಿಧಾನವನ್ನು ರೂಪಿಸಿಕೊಂಡಿರುವ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಪ್ರಕರಣದ ಆರೋಪಿ ಜಸೀರ್ ಬಿಲಾಲ್ ವಾನಿ 2024-25ರ ಅವಧಿಯಲ್ಲಿ ಹರಿಯಾಣದ ಫರೀದಾಬಾದ್ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಆವರಣದಲ್ಲಿ 2-3 ಬಾರಿ ತಂಗಿದ್ದ. ಈ ಪಿತೂರಿಗೆ ತಾಂತ್ರಿಕ ಬೆಂಬಲ ನೀಡಿದ್ದ. ಪ್ರಕರಣದ ಮುಖ್ಯ ಸಂಚುಕೋರ ಡಾ. ಉಮರ್ ಉನ್ ನಬಿಯನ್ನು ಜಸೀರ್ ಬಿಲಾಲ್ ವಾನಿಗೆ ಡಾ. ಆದಿಲ್ ಅಹ್ಮದ್ ರಾದರ್ ಪರಿಚಯಿಸಿದ್ದ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಈ ಸ್ಫೋಟದಲ್ಲಿ 11 ಜನರು ಮೃತಪಟ್ಟು, ಅನೇಕರು ಗಾಯಗೊಂಡಿದ್ದರು.

