ಕೋಲ್ಕತ್ತ: ಶಂಕಿತ ಅಕ್ರಮ ವಲಸಿಗರಿಗಾಗಿ ಜಿಲ್ಲಾ ಮಟ್ಟದಲ್ಲಿ ಕೇಂದ್ರಗಳನ್ನು ಸ್ಥಾಪಿಸುವ ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದ ನಿರ್ಧಾರವು ಅಂತರರಾಷ್ಟ್ರೀಯ ಗಡಿಯ ಮೂಲಕ ಅಕ್ರಮ ವಲಸಿಗರ ವಾಪಸ್ಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಉತ್ತರ 24 ಪರಗಣ ಜಿಲ್ಲೆಯ ಹಕೀಂಪುರ ಚೆಕ್ಪಾಯಿಂಟ್ನಲ್ಲಿ ಹಲವು ಅಕ್ರಮ ವಲಸಿಗರು ಬಾಂಗ್ಲಾಗೆ ಹಿಂದಿರುಗಲು ಗಡಿಯಲ್ಲಿ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳವು ಒಳನುಸುಳುಕೋರರ ವಿರುದ್ಧ ಗುರುತು ಪತ್ತೆ, ಹೆಸರು ಅಳಿಸುವಿಕೆ ಮತ್ತು ಗಡೀಪಾರು ನೀತಿಯನ್ನು ಆಕ್ರಮಣಕಾರಿಯಾಗಿ ಜಾರಿಗೆ ತರುತ್ತದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ಆಗಿದೆ.
ಗಡಿ ಜಿಲ್ಲೆಗಳಾದ ನಾಡಿಯಾ, ಹೂಗ್ಲಿ ಮತ್ತು ಉತ್ತರ 24 ಪರಗಣದ ಅಧಿಕಾರಿಗಳು ಭಾಗವಹಿಸಿದ್ದ ಕಲ್ಯಾಣಿಯಲ್ಲಿ ನಡೆದ ಆಡಳಿತಾತ್ಮಕ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ, ಗಡಿಯಲ್ಲಿ ಜಮಾಯಿಸಿರುವವರು ಬಾಂಗ್ಲಾದೇಶಕ್ಕೆ ಮರಳಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.
'ಜಲ್ದಿ ಜಲ್ದಿ ಭಾಗೋ ನಹಿ ತೋ ಜೋ ಕರ್ನಾ ಹೈ ಸರ್ಕಾರ್ ಕರೇಗಾ (ಬೇಗ ಬೇಗ ಓಡಿ ಹೋಗಿ, ಇಲ್ಲದಿದ್ದರೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ)' ಎಂದು ಅಧಿಕಾರಿ ಗಡಿಯಲ್ಲಿ ನೆರೆದಿದ್ದ ಜನರನ್ನು ಉಲ್ಲೇಖಿಸುತ್ತಾ ಹೇಳಿದ್ದಾರೆ. ಅಲ್ಲಿ ನೆರದಿರುವವರನ್ನು ಆದಷ್ಟು ಬೇಗ ಅವರ ದೇಶಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
'ನಾವು ಅವರನ್ನು ಜೈಲುಗಳಲ್ಲಿ ಹಾಕಿ, ಆಹಾರ ನೀಡುವ ಮೂಲಕ ಸಾರ್ವಜನಿಕರ ಹಣನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ಇದು ವಾಸ್ತವವಾಗಿ ಭಾರತೀಯರಿಗೆ, ವಿಶೇಷವಾಗಿ ಪಶ್ಚಿಮ ಬಂಗಾಳದ ಜನರಿಗೆ ಹಾನಿ ಮಾಡುತ್ತದೆ. ಅಕ್ರಮ ವಲಸಿಗರನ್ನು ಹೊರಹಾಕಲು ಕಾನೂನು ಇದೆ, ಆದರೆ, ಹಿಂದಿನ ಸರ್ಕಾರ ಮತ ಬ್ಯಾಂಕ್ ರಾಜಕೀಯಕ್ಕಾಗಿ ಅದನ್ನು ಬಳಸಿಕೊಂಡಿರಲಿಲ್ಲ. ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ನಾವು ಅದನ್ನು ಜಾರಿಗೆ ತರುತ್ತೇವೆ'ಎಂದು ಅವರು ಹೇಳಿದ್ದಾರೆ.
ಪುರುಷರು, ಮಹಿಳೆಯರು ಮತ್ತು ಮಕ್ಕಳು ಗುಂಪು ಗುಂಪಾಗಿ ಗಡಿಗೆ ಬಂದಿದ್ದು, ಗಡಿ ದಾಟಲು ತಮ್ಮ ಹೆಸರುಗಳನ್ನು ಅಧಿಕಾರಿಗಳು ಯಾವಾಗ ಕರೆಯುತ್ತಾರೋ ಎಂಬುದನ್ನು ಕಾಯುತ್ತಾ ನಿಂತಿರುವ ದೃಶ್ಯ ಕಂಡುಬಂದಿದೆ.

