ಶಿಮ್ಲಾ: ಇಲ್ಲಿಗೆ ಸಮೀಪದ ಢಲ್ಲಿ ಬಳಿ ಭೂಕುಸಿತದಿಂದ ಕೃಷಿ ಭೂಮಿ ಹಾಗೂ ಸೇಬು ಮರಗಳಿಗೆ ಹಾನಿಯಾಗಿದ್ದನ್ನು 'ದೇವರ ಕೃತ್ಯ' ಎಂದಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) ಇದೀಗ ತನ್ನ ನಿಲುವು ಬದಲಾಯಿಸಿದೆ.
ಭೂಕುಸಿತದಿಂದ ಹಾನಿಗೀಡಾದ ಜಮೀನನ್ನು ಖರೀದಿಸಲು ಎನ್ಎಚ್ಎಐ ನಿರ್ಧರಿಸಿದ್ದು, ಈ ಖರೀದಿ ಮೊತ್ತದ ಜೊತೆಗೆ ಸೇಬಿನ ಮರಗಳಿಗಾದ ನಷ್ಟವನ್ನು ಪರಿಗಣಿಸಿ, ಕೃಷಿ ಭೂಮಿಯ ಮಾಲೀಕ ನರಿಂದರ್ ಸಿಂಗ್ ರಾಥೋಡ್ ಅವರಿಗೆ ₹1.80 ಕೋಟಿ ಪರಿಹಾರ ನೀಡಲು ಸಮ್ಮತಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಪ್ರಾಧಿಕಾರವು ನಷ್ಟ ಪರಿಹಾರ ಪಾವತಿಸಲು ಸಮ್ಮತಿಸಿದ ಬಳಿಕ ಎನ್ಜಿಟಿಯಲ್ಲಿನ ಪ್ರಕರಣ ವಾಪಸ್ ಪಡೆಯುವುದಾಗಿ ನರಿಂದರ್ ಹೇಳಿದ್ದಾರೆ.
ಶಕ್ರಾಲ ಗ್ರಾಮದಿಂದ ಢಲ್ಲಿವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಕೈಗೊಂಡಿದ್ದ ಎನ್ಎಚ್ಎಐ ಮತ್ತು ಅದರ ಏಜೆನ್ಸಿಗಳ ವಿರುದ್ಧ ನರಿಂದರ್ ಸಿಂಗ್ ಅವರು ರಾಷ್ಟ್ರೀಯ ಹಸಿರು ನ್ಯಾಯಪೀಠದಲ್ಲಿ (ಎನ್ಜಿಟಿ) ಪ್ರಕರಣ ದಾಖಲಿಸಿದ್ದರು.
'ಪ್ರಾಧಿಕಾರ ಮತ್ತು ಅದರ ಏಜೆನ್ಸಿಗಳು ಇಳಿಜಾರಿನ ಪ್ರದೇಶವನ್ನು ಸರಿಯಾಗಿ ಬಲಪಡಿಸದೆ, ಭಾರಿ ಪ್ರಮಾಣದ ನಿರ್ಮಾಣ ಕಾರ್ಯಗಳನ್ನು ಕೈಗೊಂಡಿದ್ದವು. ಇದರಿಂದ ಶಿಮ್ಲಾದ ಗ್ರಾಮೀಣ ಭಾಗದಲ್ಲಿ ಕೃಷಿ ಭೂಮಿಗೆ ಹಾನಿ ಉಂಟಾಗಿ, 2025ರ ಮೇ ತಿಂಗಳಲ್ಲಿ ಭೂಕುಸಿತ ಸಂಭವಿಸಿದೆ' ಎಂದು ಭೂ ಮಾಲೀಕರು ಅರ್ಜಿಯಲ್ಲಿ ದೂರಿದ್ದರು.
ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯಿಂದಾಗಿ ಭೂಕುಸಿತ ಸಂಭವಿಸಿದ್ದು, ಇದರಿಂದಾಗಿ 440 ಸೇಬಿನ ಮರಗಳಿಗೆ ಹಾನಿಯಾಗಿದ್ದು, ಪರಿಹಾರವನ್ನು ಕೋರಿದ್ದರು.
ಎನ್ಎಚ್ಎಐ ಮೇ 19ರಂದು ಎನ್ಜಿಟಿಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಪರಿಹಾರ ನೀಡಲು ನಿರಾಕರಿಸಿತ್ತು. ಭೂಕುಸಿತವನ್ನು ದೇವರ ಕೃತ್ಯ ಎಂದು ಹೇಳಿತ್ತು. ಆದರೆ, ಇದೀಗ ತನ್ನ ನಿಲುವು ಬದಲಿಸಿಕೊಂಡಿದ್ದು, ಲೋಕೋಪಯೋಗಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಮೌಲ್ಯಮಾಪನದಂತೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಲು ಮುಂದಾಗಿದೆ.
'ನಮ್ಮ ಕುಟುಂಬ ಇಲ್ಲಿಯೇ ನೆಲಸಿದೆ. ತಲೆಮಾರುಗಳಿಂದಲೂ ಹಣ್ಣು ಬೆಳೆಯುತ್ತಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸುರಂಗ ಕೊರೆದ ಬಳಿಕವಷ್ಟೇ 'ದೇವರ ಕೃತ್ಯ' ನಡೆಯಿತು' ಎಂದಿದ್ದಾರೆ ನರಿಂದರ್.

