ಚೆನ್ನೈ: ತಮಿಳುನಾಡು ವಿಧಾನಸಭೆ ಸ್ಪೀಕರ್ ಆಗಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಪ್ರಭಾಕರ್, ಡೆಪ್ಯೂಟಿ ಸ್ಪೀಕರ್ ಆಗಿ ಎಂ. ರವಿಶಂಕರ್ ಅವರು ಮಂಗಳವಾರ ಆಯ್ಕೆಯಾಗಿದ್ದಾರೆ.
ಸ್ಪೀಕರ್ ಆಯ್ಕೆ ಬೆನ್ನಲ್ಲೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಾತನಾಡಿ, 'ಜನರ ನಿರೀಕ್ಷೆಗಳನ್ನು ಯೋಜನೆಗಳಾಗಿ ಮತ್ತು ಕಾನೂನುಗಳಾಗಿ ಪರಿವರ್ತಿಸುವ ಜವಾಬ್ದಾರಿ ಎಲ್ಲರ ಮೇಲಿದೆ' ಎಂದು ಹೇಳಿದ್ದಾರೆ.
17ನೇ ತಮಿಳುನಾಡು ವಿಧಾನಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ವಿಜಯ್, 'ಇಲ್ಲಿ ಎಲ್ಲರೂ ಸಮಾನರು. ವಿರೋಧ ಪಕ್ಷದ ಸದಸ್ಯರು ಮತ್ತು ಆಡಳಿತಾರೂಢ ಟಿವಿಕೆ ಸದಸ್ಯರು ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ಸಮಾನ ಪ್ರಾಮುಖ್ಯತೆ ಮತ್ತು ಮೌಲ್ಯ ನೀಡಲಾಗುವುದು. ಅನಗತ್ಯ ವಿಷಯಗಳನ್ನು ತಿರಸ್ಕರಿಸಿ, ಒಳ್ಳೆಯ ಅಂಶಗಳನ್ನು ಸ್ವೀಕರಿಸಲಾಗುವುದು. ಈ ಸದನವು ಪ್ರಜಾಪ್ರಭುತ್ವದ ಹೃದಯ ಮತ್ತು ಮೆದುಳಿನಂತೆ ಕಾರ್ಯನಿರ್ವಹಿಸಲಿದೆ' ಎಂದಿದ್ದಾರೆ.
ಸ್ಪೀಕರ್ ಆಗಿ ಪ್ರಭಾಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಆಗಿ ರವಿಶಂಕರ್ ಅವರು ಆಯ್ಕೆಯಾಗಿರುವುದನ್ನು ಶ್ಲಾಘಿಸಿದ ವಿಜಯ್, ಸದನವನ್ನು ಸುಗಮವಾಗಿ ನಡೆಸಿಕೊಡುವಂತೆ ಅವರಿಗೆ ಶುಭ ಹಾರೈಸಿದರು.
ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕ ಅವರ ಉಲ್ಲೇಖದೊಂದಿಗೆ ಭಾಷಣ ಆರಂಭಿಸಿದ ವಿಜಯ್, ಸದನದಲ್ಲಿ ಎಲ್ಲರೂ ಸಮಾನರು ಎಂದು ಒತ್ತಿ ಹೇಳಿದರು. ಯುವಜನರ ಕಲ್ಯಾಣ ಮತ್ತು ಆಡಳಿತದಲ್ಲಿ ಪಾರದರ್ಶಕತೆಗೆ ತಮ್ಮ ಸರ್ಕಾರ ಆದ್ಯತೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ, ಹಂಗಾಮಿ ಸ್ಪೀಕರ್ ಎಂ. ವಿ. ಕರುಪ್ಪಯ್ಯ ಅವರು ಪ್ರಭಾಕರ್ ಅವರ ಹೆಸರನ್ನು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ ಮತ್ತು ಈ ಹುದ್ದೆಗೆ ಅವರದ್ದು ಒಂದೇ ನಾಮಪತ್ರ ಸಲ್ಲಿಕೆಯಾಗಿದೆ ಎಂದು ಪ್ರಕಟಿಸಿದರು. ಈ ಹಿನ್ನೆಲೆಯಲ್ಲಿ ಪ್ರಭಾಕರ್ ಅವರು ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.
ಬಳಿಕ ಪ್ರಭಾಕರ್ ಅವರು ಡೆಪ್ಯೂಟಿ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಸಿದರು. ತುರೈಯೂರ್ ಕ್ಷೇತ್ರದ ಟಿವಿಕೆ ಶಾಸಕ ರವಿಶಂಕರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಅವರು ಕೂಡ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.

