ಸಿಂಧಿ ಸಮುದಾಯದ ಪರವಾಗಿ ತಲಾ ಒಂದು ಕೆಜಿ ತೂಕದ 200 ಬೆಳ್ಳಿ ಇಟ್ಟಿಗೆಗಳನ್ನು ದೇಣಿಗೆಯಾಗಿ ಜ.26,2021ರಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಲಾಗಿತ್ತು. ದೇಣಿಗೆ ಸ್ವೀಕರಿಸಿದ ಸಂದರ್ಭದಲ್ಲಿ ಯಾವುದೇ ರಸೀದಿಯನ್ನು ನೀಡಿರಲಿಲ್ಲ. ಬೆಳ್ಳಿಯನ್ನು ಹೇಗೆ ಮತ್ತು ಎಲ್ಲಿ ಬಳಸಬೇಕು ಎಂಬ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದರು ಎಂದು ಮನ್ವಾನಿ ಹೇಳಿದರು.
'ಬೆಳ್ಳಿಯನ್ನು ಎಲ್ಲಿ ಬಳಸಲಾಗುತ್ತದೆ ಎಂದು ನಾವೆಂದಿಗೂ ಪ್ರಶ್ನಿಸಿರಲಿಲ್ಲ. ಆದರೆ ರಾಮ ಮಂದಿರದ ದೇಣಿಗೆಗಳಿಗೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿರುವ ಬಗ್ಗೆ ಇತ್ತೀಚಿಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಕಳವಳಗಳನ್ನುಂಟು ಮಾಡಿವೆ. ಬೆಳ್ಳಿಯನ್ನು ಮಂದಿರಕ್ಕೆ ಬಳಸಲಾಗಿದೆಯೇ ಮತ್ತು ಬಳಸಿದ್ದರೆ ಹೇಗೆ ಎಂದು ತಿಳಿಯಲು ನಾವು ಬಯಸಿದ್ದೇವೆ' ಎಂದು ಅವರು ಹೇಳಿದರು. ಮಂದಿರಕ್ಕೆ ನೀಡಲಾಗಿದ್ದ ದೇಣಿಗೆಗಳನ್ನು ಅನ್ಯಉದ್ದೇಶಕ್ಕೆ ಬಳಸಿದ್ದರೆ ಅದು ಭವಿಷ್ಯದ ದಾನಿಗಳ ವಿಶ್ವಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ದೇಣಿಗೆ ನೀಡುವ ಸಮಯದಲ್ಲಿ ಈ ಬೆಳ್ಳಿಯ ಮೌಲ್ಯ ಸುಮಾರು 1.5 ಕೋಟಿಯಿಂದ 2 ಕೋಟಿ ರೂ.ಆಗಿತ್ತು. ಮನ್ವಾನಿ ಪ್ರಕಾರ,ಅದರ ಪ್ರಸ್ತುತ ಮೌಲ್ಯಗಣನೀಯವಾಗಿ ಹೆಚ್ಚಾಗಿದ್ದು, ಈಗ 6 ಕೋಟಿಯಿಂದ 7 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಧಾರ್ಮಿಕ ಮತ್ತು ಸಾರ್ವಜನಿಕ ಉದ್ದೇಶಗಳಿಗಾಗಿ ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ಪಡೆಯುವ ಹಕ್ಕು ದಾನಿಗಳಿಗೆ ಇದೆ ಎಂದು ಒತ್ತಿ ಹೇಳಿದ ಮನ್ವಾನಿ, ಅಕ್ರಮಗಳ ಆರೋಪಗಳ ಕುರಿತು ನಡೆಯುತ್ತಿರುವ ತನಿಖೆಯನ್ನು ಸ್ವಾಗತಿಸಿದರು. ಯಾವುದೇ ತಪ್ಪು ಸಾಬೀತಾದರೆ ಅದಕ್ಕೆ ಕಾರಣರಾದವರು ಸೂಕ್ತ ಕ್ರಮ ಎದುರಿಸಬೇಕು ಎಂದು ಹೇಳಿದರು.
ಪ್ರತ್ಯೇಕ ಬೆಳವಣಿಗೆಯೊಂದರಲ್ಲಿ, ಮಂದಿರಕ್ಕೆ ದೇಣಿಗೆ ನೀಡಲಾದ ಮೂರು ಕೆಜಿ ತೂಕದ ಬೆಳ್ಳಿಯ ದೀಪ ಸೇರಿದಂತೆ ಬೆಳ್ಳಿ ವಸ್ತುಗಳ ಪ್ರಸ್ತುತ ಸ್ಥಿತಿಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ನ ಉತ್ತರ ಭಾರತದ ಮುಖ್ಯಸ್ಥ ಅನುರಾಗ್ ರಸ್ತೋಗಿ ಹೇಳಿದ್ದಾರೆ.
ಆಗಸ್ಟ್ 2020ರಲ್ಲಿ ಭೂಮಿ ಪೂಜೆ ಸಮಾರಂಭಕ್ಕೆ ಮೊದಲು ಅಸೋಸಿಯೇಷನ್ ದೇಣಿಗೆಯಾಗಿ ನೀಡಿದ್ದ ಸುಮಾರು 39.26 ಕೆಜಿ ತೂಕದ ಬೆಳ್ಳಿ ವಸ್ತುಗಳೂ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

