ಕಾಸರಗೋಡು: ಸುಮಾರು62ದಿವಸಗಳ ಆಳಸಮುದ್ರ ಮೀನುಗಾರಿಕೆಯ ಮೇಲಿನ ನಿಷೇಧ ಕೊನೆಗೊಂಡು ಮೀನುಕಾರ್ಮಿಕರು ಸಮುದ್ರಕ್ಕಿಳಿಯುವ ಸಿದ್ಧತೆ ನಡುವೆ ಹವಾಮಾನದ ಏರುಪೇರು, ಮೀನುಗಾರರ ನಿರೀಕ್ಷೆ ಹುಸಿಗೊಳಿಸಿದೆ.
ಟ್ರೋಲಿಂಗ್ ನಿಷೇಧ ಕೊನೆಗೊಂಡರೂ ಮೀನು ಕಾರ್ಮಿಕರಿಗೆ ಸಮುದ್ರಕ್ಕೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಬಿರುಸಿನ ಗಾಳಿ ಹಾಗೂ ಮಳೆಯಿಂದಾಗಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಸರ್ಕಾರದ ಆದೇಶಾನುಸಾರ ಸಮುದ್ರಕ್ಕಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.
ಟ್ರೋಲಿಂಗ್ ನಿಷೇಧ ಪೂರ್ತಿಗೊಂಡು ಭಾರೀ ಮೀನು ಸಂಗ್ರಹದ ನಿರೀಕ್ಷೆಯೊಂದಿಗೆ ಕಾರ್ಮಿಕರು ದೋಣಿ, ಬಲೆಗಳನ್ನು ದುರಸ್ತಿ ಪಡಿಸಿ ಸಮುದ್ರಕ್ಕೆ ತೆರಳುವ ಸಿದ್ಧತೆಯನ್ನು ಪೂರ್ಣಗೊಳಿಸಿದ್ದರು. ಅಲ್ಲದೆ ಉತ್ತಮ ರೀತಿಯಲ್ಲಿ ಮೀನು ಲಭ್ಯವಾಗುವ ಬಗ್ಗೆ ಭರವಸೆಯೂ ಅವರಲ್ಲಿತ್ತು. ಈ ಮಧ್ಯೆ ಬಿರುಸಿನ ಗಾಳಿ, ಮಳೆ, ರೆಡ್ ಅಲರ್ಟ್, ಸಮುದ್ರದ ಅಬ್ಬರದ ಅಲೆಗಳು ಇವೆಲ್ಲವೂ ಮೀನುಗಾರರನ್ನು ಅಧೀರರನ್ನಾಗಿಸಿದೆ.
ಅಧಿಕಾರಿಗಳ ನಿರ್ದೇಶ ಪಾಲಿಸುವ ಅನಿವಾರ್ಯತೆ ಮೀನುಗಾರರಿಗಿದೆ. ಕಳೆದ ಸುಮಾರು ಎರಡು ತಿಂಗಳ ಕಾಲಾವಧಿಯಲ್ಲಿ ಮೀನು ಲಭ್ಯವಾಗದೆ ಮೀನುಪ್ರಿಯರೂ ಕಂಗಾಲಾಗಿದ್ದಾರೆ. ಕರಾವಳಿ ಜನತೆಯ ಬೇಡಿಕೆಯ ಮೀನು ಬೂತಾಯಿ ಹಾಗೂ ಬಂಗುಡೆ ಬೆಲೆ 300ರ ಗಡಿ ದಾಟಿದ್ದು, ಮೀನಿನ ಲಭ್ಯತೆಯೂ ಕಡಿಮೆಯಾಗಿತ್ತು.

