ತಿರುವನಂತಪುರಂ: 2024ರ ಲೋಕಸಭಾ ಚುನಾವಣೆಯಲ್ಲಿ ಅಲಪ್ಪುಳ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಸಾಧಿಸಿದ್ದ ಗೆಲುವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.
ಹಿಂದಿನ ಲೋಕಸಭಾ ಅವಧಿಯಲ್ಲಿ ಅಲಪ್ಪುಳ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಹಾಗೂ ಅರೂರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದ ಸಿಪಿಎಂ ನಾಯಕ ಎ.ಎಂ. ಆರಿಫ್ ಅವರು ಈ ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು.
ಅರ್ಜಿದಾರರು ತಮ್ಮ ಕ್ರಮಕ್ಕೆ ಸಂಬಂಧಿಸಿದಂತೆ ಸೂಕ್ತ ಕಾರಣವನ್ನು ಬಹಿರಂಗಪಡಿಸಲು ವಿಫಲರಾದರೆ, ಅಂತಹ ಅರ್ಜಿಯನ್ನು ವಜಾಗೊಳಿಸಲು ಅವಕಾಶ ನೀಡುವ ನಾಗರಿಕ ನೀತಿ ಸಂಹಿತೆಯ ಆದೇಶ VIIರ ನಿಯಮ 11(ಎ) ಅಡಿ ನ್ಯಾಯಮೂರ್ತಿ ಜಿ. ಗಿರೀಶ್ ಅವರು ಅರ್ಜಿಯನ್ನು ವಜಾಗೊಳಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಹಾಗೂ ಮತದಾರರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದ ಆರಿಫ್, ಕೆ.ಸಿ. ವೇಣುಗೋಪಾಲ್ ಅವರ ಚುನಾವಣಾ ಗೆಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಅರ್ಜಿಯು ಲೋಪಗಳಿಂದ ಕೂಡಿದೆ ಹಾಗೂ ಅರ್ಜಿಯಲ್ಲಿ ಅಗತ್ಯ ವಿವರಗಳನ್ನು ಸಮರ್ಪಕವಾಗಿ ನಮೂದಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು. ಮತ್ತಷ್ಟು ವಿಚಾರಣೆ ನಡೆಸಲು ಅಗತ್ಯವಿರುವ ತಮ್ಮ ಕ್ರಮದ ಕುರಿತ ಕಾರಣಗಳನ್ನು ಅರ್ಜಿದಾರರು ಬಹಿರಂಗಪಡಿಸಿಲ್ಲ ಎಂದು ಹೇಳಿದ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿತು.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಅಲಪ್ಪುಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಸಿ. ವೇಣುಗೋಪಾಲ್ ಅವರು 63,513 ಮತಗಳ ಅಂತರದಿಂದ ಎ.ಎಂ. ಆರಿಫ್ ಅವರನ್ನು ಪರಾಭವಗೊಳಿಸಿದ್ದರು.

