ಮುಂಬೈ: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಇಬ್ಭಾಗವಾಗಲಿದೆ ಎಂಬ ವದಂತಿಗಳು ಹರಡುತ್ತಿವೆ. ಸಂಸದರು ಪಕ್ಷಾಂತರ ಮಾಡಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಏಕನಾಥ ಶಿಂದೆ ಅವರ ಬಣಕ್ಕೆ ಸೇರಲು ಪ್ರತಿ ಸಂಸದರಿಗೆ ₹50 ಕೋಟಿ ಆಮಿಷ ಒಡ್ಡಲಾಗಿದೆ ಎಂದು ಸಂಜಯ್ ರಾವುತ್ ಗಂಭೀರ ಆರೋಪ ಮಾಡಿದ್ದಾರೆ.
'ಪ್ರತಿ ಸಂಸದರ ಕನಿಷ್ಠ ಬೆಂಬಲ ಬೆಲೆಯನ್ನು ₹50 ಕೋಟಿಗೆ ನಿಗದಿಪಡಿಸಲಾಗಿದೆ. ಇದರಲ್ಲಿ ₹15 ಕೋಟಿಯನ್ನು ಅಡ್ವಾನ್ಸ್ ಆಗಿ ನೀಡಲಾಗಿದೆ. ಈ ಹಣ ಪಡೆದ ನಂತರವಷ್ಟೇ ಚಾರ್ಟರ್ಡ್ ವಿಮಾನಗಳನ್ನು ಹತ್ತಿದ್ದಾರೆ' ಎಂದು ರಾವುತ್ ಹೇಳಿದ್ದಾರೆ.
'ನಾಂದೇಡ್ ಮತ್ತು ಪುಣೆ ಸೇರಿದಂತೆ ಮೂರು ಸ್ಥಳಗಳಿಂದ ಸಂಸದರನ್ನು ಹೊತ್ತ ಮೂರು ಚಾರ್ಟರ್ಡ್ ವಿಮಾನಗಳು ದೆಹಲಿಗೆ ಹೊರಟಿವೆ' ಎಂದು ಅವರು ಆರೋಪಿಸಿದ್ದಾರೆ.
'ಈ ಹಿಂದೆ ಇವರಿಗೆ ರಿಕ್ಷಾದಲ್ಲಿ ಹೋಗಲು ಹಣವಿರಲಿಲ್ಲ. ಆದರೆ ಠಾಕ್ರೆ ಅವರ ಹೆಸರಿನಿಂದಾಗಿ ಖಾಸಗಿ ಜೆಟ್ಗಳಲ್ಲಿ ಹಾರಾಡುವಷ್ಟು ಯೋಗ್ಯತೆ ಬೆಳೆದಿದೆ' ಎಂದು ಹೇಳಿದ್ದಾರೆ.
'ನಾವು ಟಿಕೆಟ್ ನೀಡದಿದ್ದರೆ ಲೋಕಸಭೆಗೆ ಆಯ್ಕೆಯಾಗುತ್ತಿರಲಿಲ್ಲ. ಅವರನ್ನು ಸಂಸದರನ್ನಾಗಿ ಮಾಡಲು ಬೆವರು ಸುರಿಸಿದ್ದೇವೆ. ಹಣಕಾಸಿನ ನೆರವನ್ನು ನೀಡಿದ್ದೇವೆ' ಎಂದು ಹೇಳಿದ್ದಾರೆ.
'ಸದ್ಯ ಎಲ್ಲ ಒಂಬತ್ತು ಸಂಸದರೂ ನಮ್ಮೊಂದಿಗೆ ಇದ್ದಾರೆ ಎಂದು ಭಾವಿಸುತ್ತೇವೆ. ಒಂದು ವೇಳೆ ಯಾರಾದರೂ ಪಕ್ಷ ಬಿಟ್ಟು ಹೋಗಲು ಬಯಸಿದರೆ, ಅವರು ಮೊದಲು ಶಿವಸೇನಾ (ಯುಬಿಟಿ) ಮತ್ತು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಅವರು ಆಗ್ರಹಿಸಿದ್ದಾರೆ.
'ಮಹಾರಾಷ್ಟ್ರದ ಜನತೆ ಮತ್ತು ಶಿವಸೇನಾದ ಸೈನಿಕರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ' ಎಂದು ಹೇಳಿದ್ದಾರೆ.
'ಈಗ ಶಿಂದೆ ಬಣ ಸೇರಲಿದ್ದಾರೆ ಎನ್ನಲಾದ ಸಂಸದರು ಈ ಹಿಂದೆ ಠಾಕ್ರೆ ಅವರನ್ನು ಬಿಟ್ಟು ಹೋಗುವುದಿಲ್ಲ ಎಂದು ಸಾಯಿಬಾಬಾ, ಆಯಿ ಭವಾನಿ, ತಾಯಿ, ಮಗಳು ಮತ್ತು ತಂದೆಯ ಹೆಸರಿನಲ್ಲಿ ಪ್ರಮಾಣ ಮಾಡಿದ್ದರು. ಈಗ ನಾವು ಯಾರನ್ನು ನಂಬಬೇಕು' ಎಂದು ರಾವುತ್ ಪ್ರಶ್ನಿಸಿದ್ದಾರೆ.

