ಜಿ7 ಶೃಂಗಸಭೆಯ ನೇಪಥ್ಯದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ನೀಡಿರುವ ಹೇಳಿಕೆಯನ್ನು ತರೂರ್ ಶ್ಲಾಘಿಸಿದ್ದರು. ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ರಮೇಶ್, ಕಾಂಗ್ರೆಸ್ ತನ್ನ ನಾಯಕರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಪಕ್ಷದ ವೇದಿಕೆಗಳಲ್ಲಿ ಮುಕ್ತವಾಗಿ ಚರ್ಚಿಸಲು ಅವಕಾಶ ನೀಡುತ್ತದೆ ಎಂದು ಹೇಳಿದರು.
''ನಮ್ಮ ಪಕ್ಷದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಮಾತನಾಡುವ ಅತ್ಯಂತ ಜ್ಞಾನಿ ಮತ್ತು ಅನುಭವಿ ನಾಯಕರಿದ್ದಾರೆ. ನಾವು ಪ್ರಜಾಪ್ರಭುತ್ವವಾದಿ ಪಕ್ಷವಾಗಿದ್ದು, ವಿಭಿನ್ನ ದೃಷ್ಟಿಕೋನಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುತ್ತೇವೆ ಮತ್ತು ಪಕ್ಷದ ವೇದಿಕೆಗಳಲ್ಲಿ ಮುಕ್ತ ಹಾಗೂ ಪೂರ್ಣ ಪ್ರಮಾಣದ ಚರ್ಚೆಗಳನ್ನು ನಡೆಸುತ್ತೇವೆ. ಪ್ರಜಾಸತ್ತಾತ್ಮಕವಾಗಿರುವುದು ಕಾಂಗ್ರೆಸ್ ಪಕ್ಷದ ಶಕ್ತಿ ಎಂಬುದಾಗಿ ನಾನು ನೋಡುತ್ತೇನೆ'' ಎಂದು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರಮೇಶ್ ಹೇಳಿದರು.
ಸಾರ್ವಜನಿಕ ಮತ್ತು ಖಾಸಗಿ ಚರ್ಚೆಗಳೆರಡರಲ್ಲೂ ಪ್ರಧಾನಿ ಮೋದಿ ಭಾರತದ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ತರೂರ್ ಹೇಳಿದ್ದರು. ಯುದ್ಧದ ಸಮಯದಲ್ಲಿ ವಾಣಿಜ್ಯ ಹಡಗುಗಳಲ್ಲಿ ಕೆಲಸ ಮಾಡುವ ನಾಗರಿಕ ನಾವಿಕರನ್ನು ಸೈನಿಕರು ಎಂದು ಪರಿಗಣಿಸಬಾರದು ಎಂದು ಮೋದಿ ಹೇಳಿದ್ದಾರೆ ಎಂದು ಅವರು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ನ ಪವನ್ ಖೇರಾ, ಶಶಿ ತರೂರ್ರನ್ನು ಉದ್ದೇಶಿಸಿ, ''ಪ್ರಧಾನಿ ಮೇಲೆ ಈ ನಾಯಕನ ಆಶೋತ್ತರಗಳು ಭೌತಿಕ ಪ್ರಪಂಚದ ಮಿತಿಗಳನ್ನು ಮೀರಿವೆ. ಮೋದಿ ಅವರು ಹೇಳದ ವಿಷಯಗಳನ್ನೂ ಕೇಳಿಸಿಕೊಳ್ಳುವ ಸಾಮರ್ಥ್ಯ ಈಗ ಅವರಿಗೆ ಬಂದಿರುವಂತೆ ತೋರುತ್ತಿದೆ'' ಎಂದು ವ್ಯಂಗ್ಯವಾಡಿದ್ದರು.
ಖೇರಾ ಅವರ ಹೇಳಿಕೆಗಳಿಗೆ ಪ್ರತಿಯಾಗಿ, ಟ್ರಂಪ್ ಭೇಟಿಯ ಸಂದರ್ಭದಲ್ಲಿ ಭಾರತೀಯ ನಾವಿಕರ ಸುರಕ್ಷತೆಯ ವಿಷಯವನ್ನು ಮೋದಿ ಪ್ರಸ್ತಾಪಿಸಿದ್ದಾರೆ ಎಂದು ಹೇಳುವ ವರದಿಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಶಶಿ ತರೂರ್ ತಿರುಗೇಟು ನೀಡಿದ್ದರು.

