ಗುವಾಹಟಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ನಾಗಾ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಆರು ಮಂದಿ ನಾಗಾ ಸಮುದಾಯದವರನ್ನು ಭೀಕರವಾಗಿ ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ 'ಕುಕಿ ಝೋ ಕೌನ್ಸಿಲ್' ಜೂನ್ 25ರಂದು ಕ್ಷಮೆಯಾಚಿಸಿತ್ತಾದರೂ, ನಾಗಾ ಸಂಘಟನೆಗಳು ಕ್ಷಮೆಯನ್ನು ತಿರಸ್ಕರಿಸಿವೆ.
ಇಂಫಾಲದ ಪ್ರಮುಖ ಹೆದ್ದಾರಿಯಲ್ಲಿ ಹಮ್ಮಿಕೊಂಡಿರುವ ಆರ್ಥಿಕ ದಿಗ್ಬಂಧನವನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಾಗಾ ಒಕ್ಕೂಟಗಳು ನಿರ್ಧರಿಸಿವೆ.
ಹೋರಾಟ ತೀವ್ರಗೊಳಿಸಲು ನಾಗಾ ಸಂಘಟನೆಗಳ ತೀರ್ಮಾನ
ನಾಗಾ ಪ್ರಾಬಲ್ಯದ ಸೇನಾಪತಿ ಜಿಲ್ಲೆಯ ನಾಲ್ಕು ಪ್ರಮುಖ ಪ್ರಭಾವಿ ಸಂಘಟನೆಗಳಾದ ನಾಗಾ ಪೀಪಲ್ಸ್ ಆರ್ಗನೈಸೇಶನ್, ಟ್ರೈಬ್ಸ್ ಹೋಹೋಸ್, ಸೇನಾಪತಿ ಜಿಲ್ಲಾ ಮಹಿಳಾ ಸಂಘ ಮತ್ತು ಸೇನಾಪತಿ ಜಿಲ್ಲಾ ವಿದ್ಯಾರ್ಥಿ ಸಂಘಟನೆಗಳು ಜಂಟಿ ಸಭೆ ನಡೆಸಿವೆ. ಕುಕಿ ಪ್ರಾಬಲ್ಯದ ಕಾಂಗ್ಪೋಕ್ಪಿ ಜಿಲ್ಲೆಗೆ ಅಗತ್ಯ ವಸ್ತುಗಳ ಸರಬರಾಜನ್ನು ಸಂಪೂರ್ಣವಾಗಿ ಕಡಿತಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ-2 ರಸ್ತೆಯ ದಿಗ್ಬಂಧನವನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಆರು ಮಂದಿ ನಾಗಾ ಸಮುದಾಯದವರನ್ನು ಅಪಹರಿಸಿ ಕೊಲೆ ಮಾಡಿದ ಮೂರು ದಿನಗಳ ನಂತರ, ಅಂದರೆ ಜೂನ್ 17ರಿಂದ ನಾಗಾಗಳ ಅತ್ಯುನ್ನತ ಸಂಸ್ಥೆಯಾದ 'ಯುನೈಟೆಡ್ ನಾಗಾ ಕೌನ್ಸಿಲ್' ಆರ್ಥಿಕ ದಿಗ್ಬಂಧನವನ್ನು ಹೇರಿತ್ತು.
ಕುಕಿಗಳ ಕ್ಷಮೆಯಾಚನೆಯನ್ನು ನಾಗಾಗಳು ತಿರಸ್ಕರಿಸಿದ್ದೇಕೆ?
ಚರ್ಚ್ ಮತ್ತು ಸರ್ಕಾರದ ಮನವಿಯ ಮೇರೆಗೆ ನಾಗಾ ಸಮುದಾಯವು ಅಪಹರಿಸಿದ್ದ 14 ಮಂದಿ ಕುಕಿ ಜನರನ್ನು ಮಾನವೀಯತೆಯ ಆಧಾರದ ಮೇಲೆ ಸುರಕ್ಷಿತವಾಗಿ ಬಿಡುಗಡೆ ಮಾಡಿತ್ತು. ಆದರೆ ಕುಕಿ ಸಶಸ್ತ್ರ ಗುಂಪುಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದೆ, ಮರುದಿನವೇ ಆರು ಮಂದಿ ನಾಗಾ ಗ್ರಾಮಸ್ಥರನ್ನು ಅತ್ಯಂತ ಕ್ರೂರವಾಗಿ ಕೊಚ್ಚಿ ಕೊಲೆ ಮಾಡಿದ್ದವು.
'ಕ್ಷಮಿಸುವುದು ಕ್ರಿಶ್ಚಿಯನ್ ಧರ್ಮದ ಪ್ರಮುಖ ಮೌಲ್ಯ ಹೌದು. ಆದರೆ ಕುಕಿ ಸಂಘಟನೆಗಳು ತೋರಿಸಿದ ಅತಿಮಾನುಷ ಮತ್ತು ಕ್ರೂರ ನಡವಳಿಕೆಯಿಂದಾಗಿ ಕುಕಿ ಝೋ ಕೌನ್ಸಿಲ್ನ ಕ್ಷಮೆಯಾಚನೆಯನ್ನು ನಾವು ಒಪ್ಪಲು ಸಾಧ್ಯವಿಲ್ಲ. ನಮ್ಮ ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಹತ್ಯಾಕಾಂಡದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಿ, ಸಶಸ್ತ್ರ ಗುಂಪಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ನಮಗೆ ನ್ಯಾಯ ಸಿಕ್ಕಂತಾಗುವುದಿಲ್ಲ ಎಂದು ನಾಗಾ ನಾಯಕರೊಬ್ಬರು' ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುನೈಟೆಡ್ ನಾಗಾ ಕೌನ್ಸಿಲ್ ಇಟ್ಟಿರುವ ಪ್ರಮುಖ ಬೇಡಿಕೆಗಳು
ಕೇಂದ್ರ ಮತ್ತು ಮಣಿಪುರ ಸರ್ಕಾರಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ರಾಷ್ಟ್ರೀಯ ಹೆದ್ದಾರಿಯ ಆರ್ಥಿಕ ದಿಗ್ಬಂಧನವನ್ನು ಹಿಂಪಡೆಯುವುದಿಲ್ಲ ಎಂದು ಯುಎನ್ಸಿ ಸ್ಪಷ್ಟಪಡಿಸಿದೆ.
*ಹತ್ಯೆಯ ಹಿಂದೆ ಇರುವ ಕುಕಿ ಸಶಸ್ತ್ರ ಗುಂಪುನ ಎಲ್ಲಾ ಸದಸ್ಯರನ್ನು ತಕ್ಷಣ ಬಂಧಿಸಬೇಕು.
* ಜೂನ್ 13ರಂದು ನಾಗಾ ಗ್ರಾಮಸ್ಥ ವಿಲ್ಸನ್ ಥಂಗಾ ಚಿರು ಅವರನ್ನು ಕೊಂದವರನ್ನು ಸೆರೆಹಿಡಿಯಬೇಕು.
*ನಾಗಾಗಳನ್ನು ಅಪಹರಿಸಲು ದಾರಿ ಮಾಡಿಕೊಟ್ಟ ಲೈಲೋನ್ ವೈಫೀ ಕುಕಿ ಗ್ರಾಮದ ಮುಖ್ಯಸ್ಥ ಹಾಗೂ ಈ ಅಪರಾಧಕ್ಕೆ ಸಾಥ್ ನೀಡಿದ ಮಣಿಪುರ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು.
*ಕೆಎನ್ಎಫ್ (ಪಿ) ಸಂಘಟನೆಯನ್ನು ಭಯೋತ್ಪಾದಕ ಗುಂಪು ಎಂದು ಘೋಷಿಸಬೇಕು, ಕುಕಿ ಸಶಸ್ತ್ರ ಗುಂಪುಗಳೊಂದಿಗಿನ ಸರ್ಕಾರದ ನಿಯಮಗಳ ಕುರಿತಾದ ಕಾರ್ಯಾಚರಣೆ ನಿಗ್ರಹ (ಎಸ್ಒಒ) ಒಪ್ಪಂದಕ್ಕೆ ರದ್ದುಗೊಳಿಸಬೇಕು.
* ಕೆಎನ್ಎಫ್(ಪಿ) ಗುಂಪಿನ ನಾಯಕನ ಪತ್ನಿಯಾಗಿರುವ ಮಣಿಪುರದ ಉಪ ಮುಖ್ಯಮಂತ್ರಿ ನೆಮ್ಚಾ ಕಿಪ್ಗೆನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಈ ನಡುವೆ ಕಿಪ್ಗೆನ್ ಅವರು ಈ ಗುಂಪಿನೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ನಿರಾಕರಿಸಿದ್ದಾರೆ.
ಹೆಣ್ಣುಮಕ್ಕಳು ಬರಲು ಸ್ವಲ್ಪ ಸಮಯ ಹಿಡಿಯುತ್ತೆ: ಟಾಕ್ಸಿಕ್ ಬಗ್ಗೆ ಯಶ್ ಅಪ್ಡೇಟ್ ಇxಠಿಟಚಿiಟಿeಡಿ: ಯುರೋಪ್ನಲ್ಲಿ ಬಿಸಿಲಾಘಾತದ ನಡುವೆ ಎಸಿ ಬಳಕೆ ಕುರಿತು ಕಾವೇರಿದ ಚರ್ಚೆ
ಕೇಂದ್ರಕ್ಕೆ ಕುಕಿಗಳ 48 ಗಂಟೆಗಳ ಗಡುವು
ನಾಗಾ ಸಂಘಟನೆಗಳ ಆರ್ಥಿಕ ದಿಗ್ಬಂಧನದಿಂದಾಗಿ ಕುಕಿ ಪ್ರಾಬಲ್ಯದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಕೊರತೆ ಎದುರಾಗಿದ್ದು, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಒಂದು ಕಡೆ ಮೈತೇಯಿ ಪ್ರಾಬಲ್ಯದ ಇಂಫಾಲ ಕಣಿವೆ, ಮತ್ತೊಂದು ಕಡೆ ನಾಗಾ ಪ್ರಾಬಲ್ಯದ ಸೇನಾಪತಿ ಜಿಲ್ಲೆಯ ನಡುವೆ ಸಿಲುಕಿರುವ ಕಾಂಗ್ಪೋಕ್ಪಿಗೆ ಪೂರೈಕೆ ಮಾರ್ಗಗಳು ಸಂಪೂರ್ಣ ಬಂದ್ ಆಗಿವೆ.
ಈ ಹಿನ್ನೆಲೆಯಲ್ಲಿ ಕಾಂಗ್ಪೋಕ್ಪಿಯ ಕುಕಿ ಸಂಘಟನೆಗಳ ಒಕ್ಕೂಟವಾದ 'ಕಮಿಟಿ ಆನ್ ಟ್ರೈಬಲ್ ಯೂನಿಟಿ', ಕೇಂದ್ರ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿದೆ. ಹೆದ್ದಾರಿ ದಿಗ್ಬಂಧನವನ್ನು ತೆರವುಗೊಳಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಕೈಮೀರಲಿದೆ ಎಂದು ಕುಕಿ ಸಂಘಟನೆಗಳು ಎಚ್ಚರಿಸಿವೆ.

