ಉಪ್ಪಳ: ಸಮಗ್ರ ಶಿಕ್ಷಣ ಕಾಸರಗೋಡು ಜಿಲ್ಲಾ ಯೋಜನಾ ಸಂಯೋಜಕರಾಗಿದ್ದ ಬಿಜುರಾಜ್ ವಿ.ಎಸ್. ಅವರಿಗೆ ಉಪ್ಪಳದಲ್ಲಿರುವ ಮಂಜೇಶ್ವರ ಬಿ.ಆರ್.ಸಿ. ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಮೂಲ ಸಂಸ್ಥೆಯಾದ ಹೈಯರ್ ಸೆಕೆಂಡರಿ ಶಿಕ್ಷಕರ ಸೇವೆಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಲಾಯಿತು.
ಚೆರ್ವತ್ತೂರು ಬಿ.ಆರ್.ಸಿ.ಯ ಬ್ಲಾಕ್ ಯೋಜನಾ ಸಂಯೋಜಕರಾಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಬಿಜುರಾಜ್ ವಿ.ಎಸ್. ಅವರು ಕಾಸರಗೋಡು ಜಿಲ್ಲಾ ಯೋಜನಾ ಸಂಯೋಜಕರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಕಳೆದ ಮೂರೂವರೆ ವರ್ಷಗಳಲ್ಲಿ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಸಮಗ್ರ ಶಿಕ್ಷಣದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.
ವಿಶೇಷವಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ನ ವಿವಿಧ ವಿನೂತನ ಶಿಕ್ಷಣ ಯೋಜನೆಗಳ ಮೂಲಕ ಎಸ್ಸಿ/ಎಸ್ಟಿ ಸಮುದಾಯದ ಮಕ್ಕಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದರು.
ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ಉದ್ಘಾಟಿಸಿದರು. ಮಂಜೇಶ್ವರ ಎಇಒ ನಾರಾಯಣ ಡಿ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಟಿ. ಪ್ರಕಾಶನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮುಳಿಂಜ ಜಿ.ಯು.ಪಿ. ಶಾಲೆಯ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಶುಭಾಶಂಸನೆಗೈದರು. ಮಂಜೇಶ್ವರ ಬಿಆರ್.ಸಿ. ಬ್ಲಾಕ್ ಯೋಜನಾ ಸಂಯೋಜಕ ರಾಜಗೋಪಾಲನ್ ಪಿ. ಸ್ವಾಗತಿಸಿ, ತರಬೇತುದಾರೆ ಸುಮಯ್ಯ ಎಂ.ಎ. ವಂದಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅತ್ಯುತ್ತಮ ಕಾರ್ಯಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಬಿಜುರಾಜ್ ವಿ.ಎಸ್. ಅವರಿಗೆ ಕಾರ್ಯಕ್ರಮದಲ್ಲಿ ಸ್ಮರಣಿಕೆಗಳನ್ನು ನೀಡಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ಅವರ ಹೊಸ ಸೇವಾ ಕ್ಷೇತ್ರದಲ್ಲಿಯೂ ಇನ್ನಷ್ಟು ಯಶಸ್ಸುಗಳು ದೊರೆಯಲಿ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಹಾರೈಸಿದರು.

.jpg)
.jpg)
