ಇಂಫಾಲ: ಕಳೆದ ತಿಂಗಳು ಮಣಿಪುರದಲ್ಲಿ ಕುಕಿ ಚರ್ಚ್ನ ಮೂವರು ಮುಖಂಡರನ್ನು ಹತ್ಯೆಗೈದ ಪ್ರಕರಣದ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಕರಣ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಹಿಂಸಾಚಾರ ಪೀಡಿತ ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮೇ 13ರಂದು ಶಂಕಿತ ಬಂಡುಕೋರರು ಚರ್ಚ್ನ ಮೂವರು ಮುಖಂಡರನ್ನು ಹತ್ಯೆಗೈದಿದ್ದರು.
ಇತರ ನಾಲ್ವರನ್ನು ಗಾಯಗೊಳಿಸಿದ್ದರು. ಮೃತರನ್ನು ಥಾಡೋ ಬ್ಯಾಪಿಸ್ಟ್ ಅಸೋಸಿಯೇಷನ್ (ಟಿಬಿಎ) ಸದಸ್ಯರು ಎಂದು ಗುರುತಿಸಲಾಗಿತ್ತು. ಮೂವರು ಮುಖಂಡರು ಚುರಾಚಂದಪುರದಲ್ಲಿ ಧಾರ್ಮಿಕ ಸಭೆಯೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಸಂದರ್ಭ ಈ ಘಟನೆ ನಡೆದಿತ್ತು.
ಜೂನ್ 8ರಂದು ದಾಖಲಾದ ಎನ್ಐಎಯ ಪ್ರಥಮ ಮಾಹಿತಿ ವರದಿ ಪ್ರಕಾರ, ಚುರಾಚಂದ್ಪುರದಿಂದ ಕಾಂಗ್ಪೋಕ್ಪಿ ಕಡೆಗೆ ಹೋಗುತ್ತಿದ್ದ ಎರಡು ವಾಹನಗಳ ಮೇಲೆ ಜೀರೋ ಪಾಯಿಂಟ್ (ಕೋಟ್ಜಿಮ್ ಮತ್ತು ಕೋಟ್ಲರ್ನ್ ಪ್ರದೇಶದ ನಡುವೆ)ನಲ್ಲಿ ಸಶಸ್ತ್ರ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಮೂವರು ಮುಖಂಡರು ಸ್ಥಳದಲ್ಲೇ ಮೃತಪಟ್ಟರು. ವಾಹನದಲ್ಲಿದ್ದ ಇತರ ನಾಲ್ವರು ಗುಂಡಿನ ಗಾಯಗಳಿಂದ ತೀವ್ರ ಗಾಯಗೊಂಡಿದ್ದರು ಎಂದು ಹೇಳಲಾಗಿತ್ತು.
ಘಟನೆ ನಡೆದ ದಿನವೇ ಮಣಿಪುರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಎನ್ಐಎಎ ಇತ್ತೀಚೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

