ಜಂತರ್ ಮಂತರ್ ಪ್ರದೇಶದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ಭಾರಿ ಪ್ರಮಾಣದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ನಡುವೆ, ದಿಲ್ಲಿ ಮೆಟ್ರೋ ನಗರದ 16 ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪ್ರಕಟಣೆ ನೀಡಿರುವ ದಿಲ್ಲಿ ಮೆಟ್ರೋ, ಪ್ರಯಾಣಿಕರಿಗಾಗಿ ಬದಲಿ ಮಾರ್ಗಗಳ ಮಾಹಿತಿಯನ್ನೂ ಪ್ರಕಟಿಸಿದೆ.
ಮೆಟ್ರೋ ನಿಲ್ದಾಣಗಳನ್ನು ಮುಚ್ಚಿದ್ದರೂ, ಪ್ರತಿಭಟನಾಕಾರರು ಗುರುವಾರ ಬೆಳಿಗ್ಗೆಯೇ ಜಂತರ್ ಮಂತರ್ ಬಳಿ ಜಮಾಯಿಸಿದ್ದಾರೆ.
ಈ ಮಧ್ಯೆ, ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳುವವರೆಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಸೋನಮ್ ವಾಂಗ್ಚುಕ್ ಘೋಷಿಸಿದ್ದಾರೆ.
ಪ್ರತಿಭಟನೆ 34ನೇ ದಿನಕ್ಕೆ ಹಾಗೂ ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ 26ನೇ ದಿನಕ್ಕೆ ಕಾಲಿಟ್ಟಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ.
ಅದೇ ವೇಳೆ, ಸೋನಮ್ ವಾಂಗ್ಚುಕ್ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಬೇಕು ಎಂದು ದೀಪ್ಕೆ ಮನವಿ ಮಾಡಿದ್ದಾರೆ. "ಅವರ ಜೀವ ಈ ದೇಶಕ್ಕೆ ಅಗತ್ಯವಿದೆ" ಎಂದು ಅವರು ಹೇಳಿದ್ದಾರೆ.
ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆದರೂ, ಅದು ಇನ್ನು ಮುಂದೆ ಜಂತರ್ ಮಂತರ್ ನಲ್ಲೇ ನಡೆಯಲಿದೆ ಎಂದು ಅಭಿಜೀತ್ ದೀಪ್ಕೆ ಹೇಳಿರುವುದಾಗಿ ವರದಿಯಾಗಿದೆ.

