ಲಖನೌ: ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳವು ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. 40 ದಿನಗಳ ಅವಧಿಯಲ್ಲಿ ಕನಿಷ್ಠ 70 ಬಾರಿ ಕಾಣಿಕೆಗಳನ್ನು ಕಳವು ಮಾಡಲಾಗಿದೆ ಎನ್ನುವುದು ಕಂಡುಬಂದಿದೆ. ಎಲ್ಲ ಘಟನೆಗಳು ಸಂಜೆ ಎಣಿಕೆಯ ಪಾಳಿಯಲ್ಲಿ ಸಂಭವಿಸಿವೆ ಎಂದು ಆರೋಪಿಗಳು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಈ ಮಾಹಿತಿಯಿಂದ, ಅಧಿಕಾರಿಗಳು ದೇಣಿಗೆ ಎಣಿಕೆ ಪ್ರಕ್ರಿಯೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಮುಂದಾಗಿದ್ದಾರೆ.
ದೇವಾಲಯವು ಈಗ ಒಂದೇ ಪಾಳಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಕಳವು ನಡೆದಿದೆ ಎಂದು ಹೇಳಲಾದ ಹಿಂದಿನ ಎರಡು ಪಾಳಿಗಳ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ. ಮೂಲಗಳ ಪ್ರಕಾರ, ಕಳವು ಅಪರಾಹ್ನ 2ರಿಂದ ರಾತ್ರಿ 9ರ ನಡುವೆ ಸಂಭವಿಸಿದೆ. ಎರಡನೇ ಪಾಳಿಯಲ್ಲಿ ದೇಣಿಗೆ ಎಣಿಕೆ ಮಾಡಲಾಗುತ್ತಿತ್ತು. ಇದಕ್ಕೂ ಮೊದಲು, ಎಣಿಕೆಯನ್ನು ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಮತ್ತು ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ಎರಡು ಪಾಳಿಗಳಲ್ಲಿ ನಡೆಸಲಾಗುತ್ತಿತ್ತು. ಪರಿಷ್ಕೃತ ವ್ಯವಸ್ಥೆಯಡಿ, ದೇಣಿಗೆ ಎಣಿಕೆಯನ್ನು ಈಗ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಮಾತ್ರ ನಡೆಸಲಾಗುತ್ತಿದೆ.
ಆರೋಪಿಗಳಾದ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ ಮತ್ತು ಕರುಣೇಶ್ ಪಾಂಡೆ ಅವರ ಕಸ್ಟಡಿ ವಿಚಾರಣೆಯ ಸಮಯದಲ್ಲಿ ಈ ಸಂಗತಿಗಳನ್ನು ಬಹಿರಂಗಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 70 ಕಳವು ಪ್ರಕರಣಗಳಲ್ಲಿ 50ಕ್ಕೂ ಹೆಚ್ಚು ಕಳವಿನಲ್ಲಿ ಅವಿನಾಶ್ ಶುಕ್ಲಾ ಭಾಗಿಯಾಗಿದ್ದಾನೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಕಳವಿನ ವೇಳೆ ಅವಿನಾಶ್ ಶುಕ್ಲಾ ಮತ್ತು ಅನುಕಲ್ಪ್ ಮಿಶ್ರಾ ಪರಸ್ಪರ ಸಹಾಯ ಮಾಡಿದ್ದಾರೆ ಎಂದು ತನಿಖೆಯಲ್ಲಿ ಕಂಡುಬಂದಿದೆ. ತನಿಖಾ ವರದಿಯ ಪ್ರಕಾರ, ಆರೋಪಿಗಳು ಕೆಲವೊಮ್ಮೆ ಒಂದೇ ದಿನದಲ್ಲಿ ಎರಡು ಬಾರಿ ಕಾಣಿಕೆಯನ್ನು ಕಳವು ಮಾಡಿದ್ದರೆ, ಇನ್ನು ಐದು ಸಂದರ್ಭಗಳಲ್ಲಿ ಒಂದೇ ದಿನದಲ್ಲಿ ಮೂರು ಬಾರಿ ಕಳವು ನಡೆಸಿರುವುದು ಬೆಳಕಿಗೆ ಬಂದಿದೆ.
ಕಳವು ಸಂಜೆಯ ಪಾಳಿಗೆ ಮಾತ್ರ ಸೀಮಿತ ಎಂದು ತನಿಖೆಯಲ್ಲಿ ದೃಢಪಟ್ಟ ನಂತರ, ಏಕ-ಶಿಫ್ಟ್ ಎಣಿಕೆ ವ್ಯವಸ್ಥೆಗೆ ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ದೇವಸ್ಥಾನದ ನಿರ್ವಹಣೆ, ಪೂಜೆ ಅಥವಾ ಅವರ ನಂಬಿಕೆಯ ಬಗ್ಗೆ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ ಎಂಬ ವರದಿಗಳನ್ನು ತಿರಸ್ಕರಿಸಿದ ಮಿಶ್ರಾ, ಅಂತಹ ಹೇಳಿಕೆಗಳನ್ನು ವದಂತಿಗಳಷ್ಟೇ ಎಂದು ಸ್ಪಷ್ಟಪಡಿಸಿದರು.
ರಾಮ ಮಂದಿರದೇಣಿಗೆ ಕಳ್ಳತನ ಪ್ರಕರಣ
ದೇವಾಲಯದ ದೇಣಿಗೆ ದುರುಪಯೋಗದ ಆರೋಪಗಳು ಹೊರಬಿದ್ದ ನಂತರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕೋರಿಕೆಯ ಮೇರೆಗೆ ಜೂನ್ 13ರಂದು ಉತ್ತರ ಪ್ರದೇಶ ಸರ್ಕಾರ ಮೂವರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಿತು. ಜೂನ್ 7ರಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದಾಗ ವಿವಾದ ಆರಂಭವಾಯಿತು.

