ನವದೆಹಲಿ: ಕೇಂದ್ರ ಸಾರಿಗೆ ಸಚಿವಾಲಯ ರೂಪಿಸಿರುವ ಕಠಿಣ ನಿಯಮಗಳು ದೇಶದ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸಂಕಷ್ಟಕ್ಕೆ ದೂಡುತ್ತಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬೆಂಬಲ ನೀಡಬೇಕಾದ ಎಂಎಸ್ಎಂಇ ವಲಯವನ್ನು ಕೇಂದ್ರ ಸರ್ಕಾರ 'ಉದ್ದೇಶಪೂರ್ವಕವಾಗಿ ಉಸಿರುಗಟ್ಟಿಸುತ್ತಿದೆ' ಎಂದು ಅವರು ದೂರಿದ್ದಾರೆ.
ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿರುವ ಸ್ಥಳೀಯ ಬಸ್ ಮತ್ತು ಟ್ರಕ್ ಬಿಲ್ಡಿಂಗ್ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅಲ್ಲಿನ ಕಾರ್ಮಿಕರು ಹಾಗೂ ಉದ್ಯಮಿಗಳೊಂದಿಗೆ ಸಂವಾದ ನಡೆಸಿದ್ದರು. ಈ ಭೇಟಿಯ ದೃಶ್ಯಗಳನ್ನೊಳಗೊಂಡ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅವರು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿಗೆ ರೀಲ್ಸ್ ಬೇಡ... ಸ್ವಚ್ಛ ಆಡಳಿತ ಬೇಕು: ವಿರೋಧ ಪಕ್ಷದ ನಾಯಕ ಆರ್.ಅಶೋಕಭಾರತದ 'ಇ20 ಪೆಟ್ರೋಲ್' ಅನ್ನು ಭೂತಾನ್ ತಿರಸ್ಕರಿಸಿದೆಯೇ: ಕೇಂದ್ರ ಹೇಳಿದ್ದೇನು ?
ರಾಹುಲ್ ಗಾಂಧಿ ಆರೋಪ
ಮೋದಿ ಸರ್ಕಾರದ 'ಮೇಕ್ ಇನ್ ಇಂಡಿಯಾ' ಮತ್ತು 'ವೋಕಲ್ ಫಾರ್ ಲೋಕಲ್' ಯೋಜನೆಗಳು ಕೇವಲ ಕಾಗದದ ಮೇಲಿನ ಘೋಷಣೆಗಳಾಗಿವೆ. ವಾಸ್ತವದಲ್ಲಿ ಸರ್ಕಾರದ ನೀತಿಗಳು ಕೇವಲ ದೊಡ್ಡ ಉದ್ಯಮಿಗಳ ಹಿತಾಸಕ್ತಿ ಕಾಯುವಂತೆ ರೂಪಿತವಾಗಿವೆ.
ತಾಂತ್ರಿಕ ದೋಷಗಳಿಂದ ಸಂಭವಿಸುವ ಬಸ್ ಅಗ್ನಿ ಅವಘಡಗಳಿಗೆ ವಾಹನ ನಿರ್ಮಿಸುವ ಸಣ್ಣ ಕುಶಲಕರ್ಮಿಗಳನ್ನು ಹೊಣೆ ಮಾಡಲಾಗುತ್ತಿದೆ. ಇದು ಅವೈಜ್ಞಾನಿಕ ಎಂದಿದ್ದಾರೆ.
ಈ ಸಣ್ಣ ಕಾರ್ಖಾನೆಗಳು ಮುಚ್ಚಲ್ಪಟ್ಟರೆ ದೇಶದ ಸಾಂಪ್ರದಾಯಿಕ ಕೌಶಲ್ಯಗಳು ನಾಶವಾಗುತ್ತವೆ. ಜೊತೆಗೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು, ಸಾಮಾನ್ಯ ಜನರ ಮೇಲೆ ಹಣದುಬ್ಬರದ ಹೊರೆ ಹೆಚ್ಚಾಗಲಿದೆ ಎಂದು ರಾಹುಲ್ ಟೀಕಿಸಿದ್ದಾರೆ.
ಅಮೆರಿಕದಲ್ಲಿರುವ ಕನ್ನಡಿಗನ ಮನಗೆದ್ದ ಬೆಂಗಳೂರು: ರೆಡ್ಡಿಟ್ನಲ್ಲಿ ಭಾರಿ ಚರ್ಚೆಮರುಭೂಮಿ ತಡೆಗೆ ಮರಗೋಡೆ: ಆಫ್ರಿಕಾದಲ್ಲಿ 8 ಸಾವಿರ ಏಒ 'ದಿ ಗ್ರೇಟ್ ಗ್ರೀನ್ ವಾಲ್'
ಬಗೆಹರಿಯದ ಸಣ್ಣ ಉದ್ಯಮಿಗಳ ಸಮಸ್ಯೆ
ಕಳೆದ ಮಾರ್ಚ್ 18ರಂದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದ ನಿಯೋಗವು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಈ ಸಮಸ್ಯೆಗಳ ಬಗ್ಗೆ ಚರ್ಚಿಸಿತ್ತು. ಹೊಸ ಮಾನದಂಡಗಳು ಮತ್ತು ದುಬಾರಿ ಪರವಾನಗಿ ಶುಲ್ಕಗಳು ಸಣ್ಣ ಉದ್ಯಮದವರನ್ನು ಉದ್ಯಮದಿಂದ ದೂರಾಗಿಸುತ್ತಿವೆ ಎಂದು ನಿಯೋಗ ಸಂಕಷ್ಟವನ್ನು ವಿವರಿಸಿತ್ತು.
ಆ ಸಂದರ್ಭದಲ್ಲಿ ಸಚಿವ ಗಡ್ಕರಿ ಅವರು ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ರಾಹುಲ್ ಗಾಂಧಿ ಪ್ರಸ್ತುತ ಹಂಚಿಕೊಂಡಿರುವ ವಿಡಿಯೊದಲ್ಲಿ, ಕೇಂದ್ರ ಸರ್ಕಾರವು ಇನ್ನೂ ದೊಡ್ಡ ಕಂಪನಿಗಳ ಪರವಾಗಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ತಮಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಸ್ಥಳೀಯ ಉದ್ಯಮಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಣ್ಣ ಉದ್ಯಮಗಳ ಹಕ್ಕುಗಳನ್ನು ರಕ್ಷಿಸಲು ತಾವು ಹೋರಾಡುವುದಾಗಿ ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ರಾಹುಲ್ ಗಾಂಧಿ (ಫೇಸ್ಬುಕ್ ಪೋಸ್ಟ್)'ಫೆರಾರಿ ಮತ್ತು ರೋಲ್ಸ್ ರಾಯ್ಸ್ ಕಂಪನಿಗಳಿಗೆ ಪೈಪೋಟಿ ನೀಡಬಲ್ಲ ಜಾಗತಿಕ ಮಟ್ಟದ ಕರಕುಶಲತೆ ಹೊಂದಿರುವ ನಮ್ಮ ದೇಶದ ಸಣ್ಣ ಉದ್ಯಮಿಗಳಿಗೆ ಗೌರವ ಮತ್ತು ಬೆಂಬಲ ನೀಡುವ ಬದಲು, ಕಠಿಣ ನಿಯಮಗಳ ಹೆಸರಿನಲ್ಲಿ ಅವರನ್ನು ಉದ್ಯಮದಿಂದ ಹೊರದೂಡಲಾಗುತ್ತಿದೆ'.

