ಇದರಿಂದಾಗಿ ಸಾವಿರಾರು ಪ್ರಯಾಣಿಕರು ಆಹಾರ, ನೀರು ಇಲ್ಲದೆ, ಹೊರಗೆ ಹೋಗಲು ದಾರಿಯಿಲ್ಲದೆ ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಳ್ಳಬೇಕಾಯಿತು.
ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್ಆರ್ಡಿಸಿ)ವು 19 ಕಿ.ಮೀ. ಉದ್ದದ 'ಮಿಸ್ಸಿಂಗ್ ಲಿಂಕ್' ರಸ್ತೆಯನ್ನು ನಿರ್ಮಿಸಿದೆ. ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು 20-25 ನಿಮಿಷ ಕಡಿಮೆ ಮಾಡಲು ಇದನ್ನು ಆರಂಭಿಸಲಾಗಿತ್ತು. ಈ ಯೋಜನೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 'ಎಂಜಿನಿಯರಿಂಗ್ ಅದ್ಭುತ' ಎಂದು ಬಣ್ಣಿಸಿದ್ದರು. ಆದರೆ, ಉದ್ಘಾಟನೆಯಾದ ಕೇವಲ ಒಂಬತ್ತು ವಾರಗಳ ಬಳಿಕ ಭಾರೀ ಮಳೆಯಿಂದ ಈ ಸುರಂಗದ ಒಂದು ಭಾಗ ಕುಸಿದು ಬಿದ್ದಿದೆ.
ಈ ಅಡಚಣೆಯಿಂದಾಗಿ ಎಕ್ಸ್ಪ್ರೆಸ್ ವೇಯ ಎರಡೂ ಬದಿಗಳಲ್ಲಿ ವಾಹನಗಳು ಹಲವು ಗಂಟೆಗಳ ಕಾಲ ನಿಂತಿದ್ದವು. ಸುರಂಗ ಕುಸಿದ ನಂತರ ಹೆದ್ದಾರಿಯ ಮೇಲೆ ಭಾರೀ ಮಳೆ ನೀರು ಹರಿದು ಬಂತು. ಇದರಿಂದಾಗಿ ಇಡೀ ರಸ್ತೆ ಜಲಾವೃತಗೊಂಡಿತು. ಪರಿಣಾಮವಾಗಿ ವಾಹನಗಳು ನಿಯಂತ್ರಣ ಕಳೆದುಕೊಳ್ಳುವ ಅಪಾಯವನ್ನು ಹೆಚ್ಚಿಸಿತು.
ಪರಿಸ್ಥಿತಿ ಸಹಜ ಸ್ಥಿತಿಗೆ ಬರುವ ವರೆಗೆ ಎಕ್ಸ್ಪ್ರೆಸ್ ವೇಯ ಮುಂಬೈ-ಪುಣೆ ಮತ್ತು ಪುಣೆ-ಮುಂಬೈ ಎರಡೂ ಮಾರ್ಗಗಳಲ್ಲಿ ಪ್ರಯಾಣಿಸದಂತೆ ಎಂಎಸ್ಆರ್ಡಿಸಿ ಸಾರ್ವಜನಿಕರಿಗೆ ಸಲಹೆ ನೀಡಿದೆ.
ಈ ಘಟನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ''ನಮ್ಮ ನಿಯಂತ್ರಣದಲ್ಲಿ ಇಲ್ಲದ ಅನೇಕ ವಿಷಯಗಳಿವೆ. ಭಾರೀ ಮಳೆಯಿಂದಾಗಿ ಮಿಸ್ಸಿಂಗ್ ಲಿಂಕ್ನಲ್ಲಿ ಭೂಕುಸಿತ ಸಂಭವಿಸಿದೆ. ಹೆದ್ದಾರಿಯ ಈ ಭಾಗದಲ್ಲಿ ಭೂಕುಸಿತ ಆಗಿರುವುದು ಇದೇ ಮೊದಲು. ಇದರಿಂದಾಗಿ ರಸ್ತೆಯ ಮೇಲೆ 100 ಟನ್ಗಳಿಗಿಂತ ಹೆಚ್ಚು ಕಲ್ಲು-ಮಣ್ಣು ಬಿದ್ದಿದೆ. ಆದರೆ, ಅಗ್ನಿ ಶಾಮಕ ದಳ ಮತ್ತು ಸರಕಾರ ಸಿಬ್ಬಂದಿ ತತ್ಕ್ಷಣ ಸ್ಥಳಕ್ಕೆ ಆಗಮಿಸಿ ಅವಶೇಷಗಳನ್ನು ತೆರವುಗೊಳಿಸಿದ್ದಾರೆ'' ಎಂದಿದ್ದಾರೆ.
ಈ ಘಟನೆ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದ್ದು, ಕಾಮಗಾರಿಯ ಗುಣಮಟ್ಟದ ಕುರಿತು ಬಿಜೆಪಿ ನೇತೃತ್ವದ ಮಹಾಯುತಿ ಸರಕಾರದ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ.
ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಅವರು, ಭ್ರಷ್ಟಾಚಾರದಿಂದಾಗಿ ಯೋಜನೆಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

