ನವದೆಹಲಿ: ಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ ಆರೋಪಗಳ ಕುರಿತು ಸಿಬಿಐ ತನಿಖೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೂ ನೋಟಿಸ್ ಜಾರಿ ಮಾಡಿದೆ.
ಅಲ್ಲದೇ, ಇದುವರೆಗೆ ನಡೆದಿರುವ ತನಿಖೆಯ ಬೆಳವಣಿಗೆಗಳ ಕುರಿತು ಸ್ಥಿತಿಗತಿ ವರದಿ ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ(ಎಸ್ಐಟಿ) ನ್ಯಾಯಪೀಠ ಸೂಚಿಸಿದೆ.
ಮೂವರು ಅರ್ಜಿದಾರರಲ್ಲಿ ಒಬ್ಬರಾದ ನರೇಂದ್ರ ಕುಮಾರ್ ಗೋಸ್ವಾಮಿ ಅವರು, ಈ ವಿಷಯದಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಕೋರಿದ್ದಾರೆ. ರಾಮಮಂದಿರದ ವ್ಯವಹಾರಗಳನ್ನು ನಿರ್ವಹಿಸುವ ರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್ನ ಹಣಕಾಸಿನ ಬಗ್ಗೆ ಭಾರತೀಯ ನಿಯಂತ್ರಕರು ಮತ್ತು ಮಹಾಲೇಖಪಾಲರ ನೇತೃತ್ವದಲ್ಲಿ ಜಂಟಿ ತನಿಖೆ ನಡೆಸಬೇಕೆಂದೂ ಅವರು ಮನವಿ ಮಾಡಿದ್ದಾರೆ.
ಇದೇ ರೀತಿಯ ಕ್ರಮಗಳನ್ನು ಕೋರಿ ಅಜಯ್ ಕುಮಾರ್ ರೈ ಮತ್ತು ದಿನೇಶ್ ಕುಮಾರ್ ಯಾದವ್ ಅವರು ಎರಡನೇ ಅರ್ಜಿಯನ್ನು ಸಲ್ಲಿಸಿದ್ದಾರೆ.
ಆರ್ಜೆಡಿ ಸಂಸದ ಸುಧಾಕರ್ ಸಿಂಗ್ ಸಲ್ಲಿಸಿರುವ ಮೂರನೇ ಅರ್ಜಿಯು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸುವುದರ ಜೊತೆಗೆ, ಸಾಕ್ಷ್ಯ ನಾಶಪಡಿಸುವುದನ್ನು ತಡೆಯಲು ಖಾತೆ ಪುಸ್ತಕ, ಬ್ಯಾಂಕ್ ದಾಖಲೆ, ಯುಪಿಐ ವಹಿವಾಟು, ಸಿಸಿಟಿವಿ ದೃಶ್ಯಾವಳಿ, ಇಮೇಲ್ ಸೇರಿದಂತೆ ಎಲ್ಲಾ ಭೌತಿಕ ಮತ್ತು ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಂರಕ್ಷಿಸಲು ನಿರ್ದೇಶನ ನೀಡುವಂತೆಯೂ ಕೋರಿದ್ದಾರೆ.
ರಾಮಮಂದಿರಕ್ಕೆ ಭಕ್ತರು ಕೊಟ್ಟ ಕಾಣಿಕೆ, ಚಿನ್ನದ ಆಭರಣಗಳು, ಬೆಳ್ಳಿ ಇಟ್ಟಿಗೆ ಕಳವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರವು ಜೂನ್ 13 ರಂದು ಎಸ್ಐಟಿ ರಚಿಸಿತ್ತು.

