ಥಾಣೆ: ಶಿವಸೇನೆ (ಉದ್ಧವ್ ಬಣ)ದ ನಾಯಕ ಹಾಗೂ ಉದ್ಧವ್ ಠಾಕ್ರೆ ಅವರ ಆಪ್ತ ಸಹೋದ್ಯೋಗಿಯಾಗಿರುವ ಮಾಜಿ ಸಂಸದ ವಿನಾಯಕ್ ರಾವತ್ ವಿರುದ್ಧ ಅವರ ಸೊಸೆ ಗಿರಿಜಾ ರಾವತ್ ನೀಡಿದ ದೂರಿನ ಮೇರೆಗೆ ಥಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮೂಢನಂಬಿಕೆ ಹಾಗೂ ವಾಮಾಚಾರದ ಹೆಸರಿನಲ್ಲಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗಿದೆ ಎಂದು ಗಿರಿಜಾ ರಾವತ್ ಆರೋಪಿಸಿದ್ದಾರೆ.
ಆದರೆ, ಈ ಆರೋಪಗಳನ್ನು ರತ್ನಗಿರಿ-ಸಿಂಧುದುರ್ಗ್ ಲೋಕಸಭಾ ಕ್ಷೇತ್ರದ ಮೂರು ಬಾರಿಯ ಮಾಜಿ ಸಂಸದ, ಒಂದು ಬಾರಿಯ ಶಾಸಕ ಹಾಗೂ ಒಂದು ಬಾರಿಯ ವಿಧಾನ ಪರಿಷತ್ ಸದಸ್ಯರಾಗಿರುವ ವಿನಾಯಕ್ ರಾವತ್ ನಿರಾಕರಿಸಿದ್ದಾರೆ. "ಜೀವನಾಂಶವಾಗಿ 12 ಕೋಟಿ ರೂ., ಮೂರು ಕೊಠಡಿಗಳ ಫ್ಲ್ಯಾಟ್ ಮತ್ತು ಕಾರೊಂದನ್ನು ಪಡೆಯುವ ಉದ್ದೇಶದಿಂದ ನನ್ನ ಸೊಸೆ ಈ ರೀತಿಯ ಆರೋಪಗಳನ್ನು ಮಾಡಿದ್ದಾಳೆ. ಆ ಪ್ರಯತ್ನ ವಿಫಲವಾದ ಬಳಿಕ ಈ ತಂತ್ರಕ್ಕೆ ಮೊರೆ ಹೋಗಿದ್ದಾಳೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಗಿರಿಜಾ ರಾವತ್ ನೀಡಿದ ದೂರಿನ ಆಧಾರದಲ್ಲಿ ಥಾಣೆ ನಗರದ ಕಾಸರ್ವಡಾವಳಿ ಪೊಲೀಸ್ ಠಾಣೆಯಲ್ಲಿ ವಿನಾಯಕ್ ರಾವತ್, ಅವರ ಪತ್ನಿ ಶಮಲ್ ರಾವತ್, ಪುತ್ರ ಗೀತೇಶ್ ರಾವತ್ ಹಾಗೂ ಮಾಂತ್ರಿಕರೆಂದು ಹೇಳಲಾಗಿರುವ ಫಿರೋಝ್ ಅದಾಬ್ ಶೇಖ್ ಮತ್ತು ಖಾಝಿ ಬಾಬಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪೈಕಿ ಫಿರೋಝ್ ಅದಾಬ್ ಶೇಖ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 3, 2017ರಂದು ಗೀತೇಶ್ ರಾವತ್ ಅವರೊಂದಿಗೆ ತನ್ನ ವಿವಾಹ ನಡೆದಿದ್ದು, 2018ರ ಬಳಿಕ ನಮ್ಮಿಬ್ಬರ ನಡುವೆ ಯಾವುದೇ ದೈಹಿಕ ಸಂಪರ್ಕ ಇರಲಿಲ್ಲ ಎಂದು ಗಿರಿಜಾ ರಾವತ್ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ, ತನ್ನ ಅತ್ತೆ-ಮಾವಂದಿರು ತನ್ನನ್ನು ವಾಮಾಚಾರ ನಡೆಸುವವರ ಬಳಿಗೆ ಕರೆದೊಯ್ದು, ಪತಿಯ ಎದುರಿನಲ್ಲೇ ತನ್ನನ್ನು 'ಬಂಜೆ' ಎಂದು ಆರೋಪಿಸಿ ಅವಮಾನಿಸಿದರು ಎಂದು ಅವರು ದೂರಿದ್ದಾರೆ. ಕಳೆದ ಏಳು ವರ್ಷಗಳಿಂದ ಸಾಮಾಜಿಕ, ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕ ಕಿರುಕುಳ ಅನುಭವಿಸಿದ್ದೇನೆ. ನನಗೆ ಗೋಮೂತ್ರ ಕುಡಿಯುವಂತೆ ಬಲವಂತ ಮಾಡಲಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.
ಗಿರಿಜಾ ರಾವತ್ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಅವರ ಪರ ವಕೀಲ ಸಾಗರ್ ಕದಮ್ ಉಪಸ್ಥಿತರಿದ್ದರು.
ಈ ಸಂಬಂಧ ಕೌಟುಂಬಿಕ ದೌರ್ಜನ್ಯ ಹಾಗೂ ಮಹಾರಾಷ್ಟ್ರ ನರಬಲಿ ಮತ್ತು ಇತರ ಅಮಾನುಷ, ದುಷ್ಟ ಹಾಗೂ ಅಘೋರಿ ಪದ್ಧತಿಗಳು ಮತ್ತು ವಾಮಾಚಾರ ತಡೆ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

