ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ನಡೆದಿದೆ ಎಂದು ಆರೋಪಿಸಿ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಿ, ಫಲಕಗಳನ್ನು ಪ್ರದರ್ಶಿಸಿದ್ದರಿಂದ ಮುಂಗಾರು ಅಧಿವೇಶನದ ಮೊದಲ ದಿನ ಲೋಕಸಭೆಯ ಕಲಾಪಗಳಿಗೆ ನಿರಂತರ ವ್ಯತ್ಯಯವುಂಟಾಗಿದ್ದು,ಸದನವನ್ನು ಹಲವು ಬಾರಿ ಮುಂದೂಡಲಾಯಿತು.
ಇದೇ ರೀತಿ ಅಡ್ಡಿಪಡಿಸುವಿಕೆ ಮುಂದುವರಿದರೆ ಸದನ ನಡೆಸಲು ಸಾಧ್ಯವಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು.
ಅಪರಾಹ್ನ ಒಂದು ಗಂಟೆಗೆ ಸದನ ಸಮಾವೇಶಗೊಂಡಾಗ ಸ್ಪೀಕರ್ ಪೀಠದಲ್ಲಿದ್ದ ದಿಲೀಪ್ ಸೈಕಿಯಾ ಅವರು,ತಮ್ಮ ಸ್ಥಾನಗಳಿಗೆ ಮರಳಿ ಕಲಾಪದಲ್ಲಿ ಭಾಗವಹಿಸುವಂತೆ ಪ್ರತಿಪಕ್ಷ ಸದಸರಿಗೆ ಸೂಚಿಸಿದರು.
'ವಿವಿಧ ವಿಷಯಗಳ ಕುರಿತು ಚರ್ಚಿಸಲು ಸದನವು ಸಿದ್ಧವಾಗಿದೆ. ಆದರೆ ನಿಮಗೆ ಆಸಕ್ತಿಯಿಲ್ಲ. ಜನಸಾಮಾನ್ಯರ ಸಮಸ್ಯೆಗಳನ್ನು ಚರ್ಚಿಸಲು ನೀವು ಬಯಸುತ್ತಿಲ್ಲ. ಇದು ಸರಿಯಾದ ಮಾರ್ಗವಲ್ಲ. ನೀವು ಪದೇ ಪದೇ ಸದನಕ್ಕೆ ಅಡ್ಡಿಪಡಿಸುತ್ತಿದ್ದೀರಿ. ನೀವು ಬ್ಯಾನರ್ಗಳು ಮತ್ತು ಪೋಸ್ಟರ್ಗಳನ್ನು ಪ್ರದರ್ಶಿಸುತ್ತಿದ್ದೀರಿ, ಇದನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.
ಈ ನಡುವೆ,ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಭಾರತದ ಮುಖ್ಯನ್ಯಾಯಮೂರ್ತಿಗಳು ಸೇರಿದಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆಯನ್ನು 34 ರಿಂದ 38ಕ್ಕೆ ಹೆಚ್ಚಿಸಿದ ಸುಗ್ರೀವಾಜ್ಞೆಯ ಬದಲಿಗೆ ತರಲಾದ ಮಸೂದೆಯನ್ನು ಮಂಡಿಸಿದರು. ಆದರೆ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬಂಧಿಸಿದಂತೆ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ರಾಜ್ಯಸಭೆಯೂ ಸಹ ಹಲವು ಬಾರಿ ಮುಂದೂಡಲ್ಪಟ್ಟಿತು.
ಹಲವಾರು ಯುವಜನರ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಒತ್ತಾಯಿಸಿದ್ದರಿಂದ ಸದನದಲ್ಲಿ ಯಾವುದೇ ಕಲಾಪಗಳು ನಡೆಯದೆಯೇ ದಿನದ ಮಟ್ಟಿಗೆ ಮುಂದೂಡಲಾಯಿತು.
ಸೋಮವಾರದ ತನ್ನ ಸಭೆಯಲ್ಲಿ ಸರಕಾರದ ಶಾಸಕಾಂಗ ವ್ಯವಹಾರಗಳಿಗೆ ಸಮಯ ನಿಗದಿಪಡಿಸಿದ ಕಲಾಪ ಸಲಹಾ ಸಮಿತಿಯ ನಿರ್ಧಾರವನ್ನು ಉಪಸಭಾಪತಿ ಹರಿವಂಶ್ ಅವರು ಸದಸ್ಯರಿಗೆ ತಿಳಿಸಿದರು. ಆದಾಗ್ಯೂ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗುವುದನ್ನು ಮುಂದುವರಿಸಿದರು. 'ಸದನವು ಸಂವಾದ ಮತ್ತು ಚರ್ಚೆಗಾಗಿ ಇದೆ. ದಯವಿಟ್ಟು ನಮಗೆ ಚರ್ಚೆ ನಡೆಸಲು ಬಿಡಿ 'ಎಂದು ಹೇಳಿದ ಹರಿವಂಶ್, ಬೆಳಗಿನಿಂದ ಸದನದಲ್ಲಿ ಯಾವುದೇ ಕಲಾಪ ನಡೆದಿಲ್ಲ ಎಂದು ಹೇಳಿದರು.

