ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳವು ಆರೋಪ ಮತ್ತು ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಲು ನಿರಾಕರಿಸಿದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕ ಶಶಿ ತರೂರ್ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇವಲ ಮಸೂದೆಗಳನ್ನು ಘೋಷಿಸಿ, ಅಂಗೀಕರಿಸಲು ಸಂಸತ್ತನ್ನು ನೋಟಿಸ್ ಬೋರ್ಡ್ ಮಾಡಬಾರದು ಎಂದು ಅವರು ಹೇಳಿದರು.
''ಸರಕಾರ ತನ್ನದೇ ಹಾದಿಯಲ್ಲಿ ಸಾಗಿದರೂ ವಿರೋಧ ಪಕ್ಷಕ್ಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇರಬೇಕು'' ಎಂಬ ಹಳೆಯ ನಾಣ್ಣುಡಿಯನ್ನು ಉಲ್ಲೇಖಿಸಿದ ತರೂರು, ಜನರ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಸಾರ್ವಜನಿಕರ ಧ್ವನಿಯನ್ನು ಪ್ರತಿಬಿಂಬಿಸಲು ಚುನಾಯಿತ ಪ್ರತಿನಿಧಿಗಳಿಗೆ ಸಂಸತ್ತು ಅವಕಾಶ ನೀಡಬೇಕು ಎಂದರು.
ಸಂಸತ್ ಭವನದತ್ತ ಮೆರವಣಿಗೆ ನಡೆಯುತ್ತಿದ್ದಾಗ ಬ್ಯಾರಿಕೇಡ್ಗಳನ್ನು ದಾಟಲು ಪ್ರಯತ್ನಿಸಿದ ಸಾವಿರಾರು ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನಕಾರರ ಮೇಲೆ ಸಂಸತ್ ಮಾರ್ಗದ ಬಳಿ ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿದ ಕುರಿತು ಸಂಸತ್ ಸಂಕೀರ್ಣದಲ್ಲಿ ಕೇಳಲಾದ ಪತ್ರಕರ್ತರ ಪ್ರಶ್ನೆಗೆ ತರೂರ್, ಅಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವಾಗ ಇಂತಹ ಕೃತ್ಯಗಳನ್ನು ಯಾವ ಮನಸ್ಥಿತಿಯಿಂದ ಮಾಡಲಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಲಾಠಿ ಪ್ರಹಾರಕ್ಕೆ ಕಾರಣವೇನು ?'' ಎಂದು ಅವರು ಪ್ರಶ್ನಿಸಿದರು.
''ಲಾಠಿ ಪ್ರಹಾರ ಅಹಿಂಸಾತ್ಮಕ ಕ್ರಮವಲ್ಲ. ಅದು ಹಿಂಸಾತ್ಮಕ ಕೃತ್ಯವಾಗಿದೆ. ಇದರ ಹಿಂದಿರುವ ತರ್ಕ ನನಗೆ ತಿಳಿಯುತ್ತಿಲ್ಲ'' ಎಂದು ಅವರು ಹೇಳಿದರು.
''ಅಯೋಧ್ಯೆ ರಾಮ ಮಂದಿರದ ದೇಣಿಗೆ ದುರುಪಯೋಗ, ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಕಾಂಗ್ರೆಸ್ನ ಛಾತ್ರೋಂ ಕಿ ಗೂಂಜ್ ಅಭಿಯಾನದ ಅಡಿಯಲ್ಲಿ ಎದ್ದಿರುವ ಸಮಸ್ಯೆಗಳಂತಹ ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾವಿಸಲು ವಿರೋಧ ಪಕ್ಷಗಳು ಬಯಸುತ್ತಿವೆ. ಆದರೆ, ಸರಕಾರ ಚರ್ಚೆಗೆ ಸಿದ್ಧವಿಲ್ಲ. ಅವರು ಚರ್ಚೆಗೆ ಏಕೆ ಹೆದರುತ್ತಿದ್ದಾರೆ ಎಂದು ನನಗೆ ತಿಳಿಯುತ್ತಿಲ್ಲ'' ಎಂದು ಶಶಿ ತರೂರ್ ತಿಳಿಸಿದರು.

