ನವದೆಹಲಿ: ಯುದ್ಧಭೂಮಿಯಲ್ಲಿನ ವೈಫಲ್ಯಗಳನ್ನು ಮುಚ್ಚಿಹಾಕಲು ಪಾಕಿಸ್ತಾನಿ ಸೇನೆಯು ಭಾರತದ 'ಆಪರೇಷನ್ ಸಿಂಧೂರ' ಕುರಿತು 'ವಿಜಯದ ಕಥನ'ವನ್ನು ಸೃಷ್ಟಿಸಿತ್ತು ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹೋದರಿ ನೊರೀನ್ ನಿಯಾಜಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಿಯಾಜಿ, 'ನಾಲ್ಕು ದಿನ ನಡೆದ ಸಂಘರ್ಷ, ಪಾಕಿಸ್ತಾನದ ಜನರಲ್ಗಳು ಮತ್ತು ಅವರ ನಾಯಕತ್ವವು ಸಾರ್ವಜನಿಕರಿಗೆ ಬಿಂಬಿಸಿದ ರೀತಿಯಲ್ಲಿ ನಡೆದಿರಲಿಲ್ಲ.
ಭಾರತ ನಡೆಸಿದ 'ಆಪರೇಷನ್ ಸಿಂಧೂರ' ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಆದರೆ ಪಾಕಿಸ್ತಾನದ ಸೇನೆಯು ತನ್ನ ಸೋಲನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿತ್ತು' ಎಂದಿದ್ದಾರೆ.
ನಿಯಾಜಿ ನೀಡಿರುವ ಹೇಳಿಕೆಗಳು ಸದ್ಯ ಪಾಕಿಸ್ತಾನದಲ್ಲಿ ತಲ್ಲಣ ಸೃಷ್ಟಿಸಿವೆ. ಸೇನೆ ಮತ್ತು ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸುಳ್ಳು, ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ಅವರು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ನಿಯಾಜಿ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ರಾಷ್ಟ್ರೀಯ ಸೈಬರ್ ಅಪರಾಧ ತನಿಖಾ ಸಂಸ್ಥೆ ಸಮನ್ಸ್ ಜಾರಿಗೊಳಿಸಿದೆ. 'ಸರ್ಕಾರಿ ಸಂಸ್ಥೆಗಳ ವರ್ಚಸ್ಸಿಗೆ ಧಕ್ಕೆ ತರುವ ಹಾಗೂ ಸುಳ್ಳು ಸುದ್ದಿಗಳನ್ನು ಹರಡುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಮನ್ಸ್ ನೀಡಲಾಗಿದೆ' ಎಂದು ತನಿಖಾ ಸಂಸ್ಥೆ ಹೇಳಿದೆ.
'ಅಬ್ರಹಾಂ ಒಪ್ಪಂದಕ್ಕೆ ಸೇರ್ಪಡೆಯಾಗಲು ಮತ್ತು ಇಸ್ರೇಲ್ ದೇಶವನ್ನು ಅಧಿಕೃತವಾಗಿ ಗುರುತಿಸಲು ಪಾಕಿಸ್ತಾನ ಒಪ್ಪಿಕೊಂಡಿದೆ' ಎಂದಿದ್ದಾರೆ.
ಅಬ್ರಹಾಂ ಒಪ್ಪಂದ ಎಂದರೆ 2020 ರಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸಿ ಇಸ್ರೇಲ್ ಮತ್ತು ಕೆಲವು ಅರಬ್ ರಾಷ್ಟ್ರಗಳ ನಡುವೆ ಮಾಡಿಸಿದ ಶಾಂತಿ ಒಪ್ಪಂದಗಳ ಸರಣಿ. ಈ ಒಪ್ಪಂದದ ಮೂಲಕ ಯು.ಎ.ಇ, ಬಹ್ರೇನ್, ಸುಡಾನ್ ಮತ್ತು ಮೊರಾಕ್ಕೊ ದೇಶಗಳು ಇಸ್ರೇಲ್ ಜೊತೆಗೆ ಆರ್ಥಿಕ, ಭದ್ರತೆ ಮತ್ತು ರಾಜತಾಂತ್ರಿಕ ಬಾಂಧವ್ಯವನ್ನು ಬೆಳೆಸಿಕೊಂಡವು.
ಇದಲ್ಲದೆ 'ಭಾರತ ದಾಳಿ ಮುಂದುವರಿಸುತ್ತಿದ್ದಂತೆ ಪಾಕಿಸ್ತಾನ ತನ್ನ ಮರ್ಯಾದೆ ಉಳಿಸಿಕೊಳ್ಳಲು ಅಮೆರಿಕದ ಮೊರೆ ಹೋಗಿತ್ತು' ಎಂದೂ ಬಹಿರಂಗಪಡಿಸಿದ್ದಾರೆ.

