ನವದಹಲಿ:
ನನ್ನ ಯುವ ಮಿತ್ರರೇ,
ನಾನು ಕಳೆದ 4 ದಶಕಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸುಧಾರಣೆಗಾಗಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಎಲ್ಲರನ್ನೂ ಒಳಗೊಳ್ಳುವ ಹಾಗೂ ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಯು ಸಶಕ್ತ ದೇಶದ ಅಡಿಪಾಯ ಎಂದು ನಾನು ಸದಾ ನಂಬಿದ್ದೇನೆ.
ದೇಶದ ಯುವಜನತೆಯ ಆಶೋತ್ತರಗಳು, ಭಾವನೆಗಳು ಮತ್ತು ಅವರ ನ್ಯಾಯಸಮ್ಮತ ನಿರೀಕ್ಷೆಗಳಿಗೆ ನಾನು ತಲೆಬಾಗುತ್ತೇನೆ. ಭಾರತದ ಯುವ ಪೀಳಿಗೆಯ ಕನಸುಗಳನ್ನು ನನಸು ಮಾಡುವುದು ನಮ್ಮೆಲ್ಲರ ನೈತಿಕ ಸಂಕಲ್ಪವಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶ ಸೇವೆ ಮಾಡಲು ನನಗೆ ಲಭಿಸಿದ ಅವಕಾಶಕ್ಕಾಗಿ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಆದರೆ, 2026ರ ಮೇ 3ರಂದು ನಡೆದ 'ನೀಟ್-ಯುಜಿ' ಪರೀಕ್ಷೆಯಲ್ಲಿ ಕೆಲವು ಅಕ್ರಮಗಳು ಬೆಳಕಿಗೆ ಬಂದವು. ಇದನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರವು, ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತು, ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆಯ ದಿನಾಂಕವನ್ನು ಘೋಷಿಸಿತು. ಇದರೊಂದಿಗೆ ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಸಿಬಿಟಿ (ಕಂಪ್ಯೂಟರ್ ಆಧಾರಿತ ಪರೀಕ್ಷೆ ) ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಯಿತು.
ಈ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವುದು ನಮ್ಮ ಪ್ರಮುಖ ಆದ್ಯತೆಯಾಗಿತ್ತು. ಇದಕ್ಕಾಗಿ ಭಾರತ ಸರ್ಕಾರದೊಂದಿಗೆ ರಾಜ್ಯ ಸರ್ಕಾರಗಳು, ವಿಶೇಷವಾಗಿ ಜಿಲ್ಲಾಡಳಿತಗಳು ಪ್ರಮುಖ ಪಾತ್ರ ವಹಿಸಿದವು. ಹಾಗೆಯೇ ವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರದೊಂದಿಗೆ 2026ರ ಜೂನ್ 21ರಂದು ಈ ಪರೀಕ್ಷೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಮೊದಲ ದಿನದಿಂದಲೇ ಈ ಕುರಿತು ನಾನು ಸಂಪೂರ್ಣ ಹೊಣೆಗಾರಿಕೆ ವಹಿಸಿಕೊಂಡೆ; ಎಂದಿಗೂ ಪರಿಸ್ಥಿತಿಯಿಂದ ಹಿಂದೆ ಸರಿಯಲಿಲ್ಲ. ಹಿಂದಿನ ಪ್ರಕರಣದಿಂದಾಗಿ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯ ಹಾಳಾಗಬಾರದು ಮತ್ತು ಯಾವೊಬ್ಬ ವಿದ್ಯಾರ್ಥಿಗೂ ಅನ್ಯಾಯವಾಗಬಾರದು ಎಂಬುದೇ ನನ್ನ ದೃಢ ಸಂಕಲ್ಪವಾಗಿತ್ತು.
ಜುಲೈ 16 ರಂದು ಪ್ರಕಟವಾದ 'ನೀಟ್-ಯುಜಿ' ಫಲಿತಾಂಶಗಳು ತೃಪ್ತಿಕರವಾಗಿದ್ದು, ಬಡವರು ಸೇರಿದಂತೆ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದ್ದಾರೆ. ಆದರೆ, ಈ ಸಂದರ್ಭದಲ್ಲೂ ವಿದ್ಯಾರ್ಥಿಗಳನ್ನು ದಾರಿತಪ್ಪಿಸಲು ಜವಾಬ್ದಾರಿಯುತ ಸ್ಥಾನಗಳಲ್ಲಿರುವ ವ್ಯಕ್ತಿಗಳು ಅವಾಂತರ ಸೃಷ್ಟಿಸಲು ಯತ್ನಿಸಿದರು; ಇದರಿಂದ ನನ್ನ ಮನಸ್ಸಿಗೆ ತೀವ್ರ ನೋವಾಯಿತು.
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಸದಾ ಅಚಲ ನಂಬಿಕೆ ಇರಿಸಿದ್ದು, ಯುವಜನತೆಯ ಆಶೋತ್ತರಗಳು, ಕನಸುಗಳು ಮತ್ತು ನಿರೀಕ್ಷೆಗಳನ್ನು ಗೌರವಿಸುತ್ತಾ ಬಂದಿದ್ದೇನೆ. ಅವರು ಕೇವಲ ಭಾರತದ ಭವಿಷ್ಯ ಮಾತ್ರವಲ್ಲ; ಹೊಸ ಹಾಗೂ ವಿಕಸಿತ ಭಾರತದ ದೀವಟಿಗೆದಾರರು, ಸೃಷ್ಟಿಕರ್ತರು ಮತ್ತು ಭವಿಷ್ಯದ ಶಿಲ್ಪಿಗಳು.
ಕಳೆದ 10 ದಿನಗಳ ಘಟನಾವಳಿ ನೋಡಿ ನನ್ನ ಮನಸ್ಸಿಗೆ ದುಃಖವಾಗಿದೆ. ಇದು ನನಗೆ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ.
ಭಾರತದ ಯುವಶಕ್ತಿಯೇ ಈ ದೇಶದ ನಿಜವಾದ ಶಕ್ತಿ.
ಜಂತರ್ ಮಂತರ್ನಲ್ಲಿ ಹಾಗೂ ದೇಶದಾದ್ಯಂತ ಉದ್ಭವಿಸಿರುವ ಪರಿಸ್ಥಿತಿಯ ಲಾಭವನ್ನು ದೇಶ ವಿರೋಧಿ ಶಕ್ತಿಗಳು ಪಡೆದುಕೊಳ್ಳದಂತೆ ತಡೆಯುವುದು, ದೇಶದ ಏಕತೆಯನ್ನು ಕಾಯ್ದುಕೊಳ್ಳುವುದು, ಭಾರತದ ಯಾವೊಬ್ಬ ವಿದ್ಯಾರ್ಥಿಯ ಭವಿಷ್ಯವೂ ಕಾನೂನು ಸಂಕೀರ್ಣತೆಗಳಲ್ಲಿ ಸಿಲುಕದಂತೆ ನೋಡಿಕೊಳ್ಳುವುದು ಮತ್ತು ನಮ್ಮ ಮಕ್ಕಳು ತಮ್ಮ ಸಮಯವನ್ನು ವ್ಯಾಸಂಗ ಹಾಗೂ ವೃತ್ತಿಜೀವನ ರೂಪಿಸಿಕೊಳ್ಳುವುದರತ್ತ ವಿನಿಯೋಗಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ನಾನು ಗೌರವಾನ್ವಿತ ಪ್ರಧಾನಮಂತ್ರಿಯವರಿಗೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ.
ಗೌರವಾನ್ವಿತ ಪ್ರಧಾನಮಂತ್ರಿಯವರ ಮಾರ್ಗದರ್ಶನ, ನಂಬಿಕೆ ಮತ್ತು ನಿರಂತರ ಬೆಂಬಲಕ್ಕಾಗಿ ನಾನು ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹಾಗೆಯೇ, ಮಂತ್ರಿಮಂಡಲದ ನನ್ನೆಲ್ಲಾ ಗೌರವಾನ್ವಿತ ಸಹೋದ್ಯೋಗಿಗಳಿಗೆ, ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಾಗೂ ನನ್ನೊಂದಿಗೆ ಕೆಲಸ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ರಾಷ್ಟ್ರಸೇವೆಯು ನನ್ನ ಜೀವನದ ಅತ್ಯುನ್ನತ ಆದ್ಯತೆಯಾಗಿದ್ದು, ಅದಕ್ಕಾಗಿ ನಾನು ಎಂದೆಂದಿಗೂ ಬದ್ಧನಾಗಿರುತ್ತೇನೆ.
ದೇವರು ಜಗನ್ನಾಥನ ಆಶೀರ್ವಾದದೊಂದಿಗೆ, ಮುಂಬರುವ ದಿನಗಳಲ್ಲೂ ಭಾರತ ಮಾತೆ, ಒಡಿಶಾದ ಜನತೆ ಹಾಗೂ ದೇಶದ ಯುವ ಜನತೆಯ ಆಶೋತ್ತರಗಳನ್ನು ಈಡೇರಿಸಲು ನಾನು ಎಲ್ಲ ರೀತಿಯಲ್ಲೂ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ.
ಇಂತಿ,
ಧರ್ಮೇಂದ್ರ ಪ್ರಧಾನ್

