ನವದೆಹಲಿ: ರಾಯಗಢ ಮತ್ತು ಅಮರಾವತಿಯಲ್ಲಿ ಅದಾನಿ ಸಮೂಹ ಸಂಸ್ಥೆಯ ಎರಡು ಯೋಜನೆಗಳಿಗಾಗಿ ಸುಮಾರು 83,700 ಚದರ ಅಡಿ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಮಹಾರಾಷ್ಟ್ರ ಸರಕಾರ ಅನುಮೋದನೆ ನೀಡಿರುವ ಬಗ್ಗೆ indianexpress.com ವರದಿ ಮಾಡಿದೆ.
ಈ ಕುರಿತು ಅರಣ್ಯ ಇಲಾಖೆಯು ಸೋಮವಾರ ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ. ಅದಾನಿ ಸಿಮೆಂಟೇಶನ್ ಲಿಮಿಟೆಡ್ ಮತ್ತು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ಗೆ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಅನುಮತಿ ನೀಡಿದೆ.
ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಸುಮಾರು 69,933 ಚದರ ಅಡಿ ಭೂಪ್ರದೇಶವಿದೆ. ರಾಯಗಢ ಜಿಲ್ಲೆಯ ಅಲಿಬಾಗ್ ತಾಲೂಕಿನ ಶಹಾಪುರ ಮತ್ತು ಶಹಾಬಾಜ್ ಗ್ರಾಮಗಳಲ್ಲಿರುವ ಮೀಸಲು ಅರಣ್ಯ, ನಾಲಾ ಮ್ಯಾಂಗ್ರೂವ್ ಅರಣ್ಯ ಹಾಗೂ ಕ್ರೀಕ್ ಮ್ಯಾಂಗ್ರೂವ್ ಅರಣ್ಯ ಭೂಮಿ ಇದರಲ್ಲಿ ಸೇರಿದೆ.
ಸರಕಾರದ ಆದೇಶದಲ್ಲಿ ಹಲವು ಷರತ್ತುಗಳನ್ನು ವಿಧಿಸಲಾಗಿದ್ದು, ಅವುಗಳಲ್ಲಿ ಅರಣ್ಯ ಅಧಿಕಾರಿಗಳಿಗೆ ಮಂಜೂರು ಮಾಡಲಾದ ಪ್ರದೇಶಕ್ಕೆ ಯಾವುದೇ ಅಡೆತಡೆಯಿಲ್ಲದೆ ಪ್ರವೇಶಿಸಲು ಅವಕಾಶ ನೀಡುವುದು ಕೂಡ ಸೇರಿದೆ. ಕಂಪೆನಿಯು ಅರಣ್ಯ ಅಧಿಕಾರಿಗಳ ಪ್ರವೇಶವನ್ನು ನಿರ್ಬಂಧಿಸಿದರೆ ಅಥವಾ ಯಾವುದೇ ರೀತಿಯ ಅಡಚಣೆ ಉಂಟುಮಾಡಿದರೆ, ಅರಣ್ಯೇತರ ಬಳಕೆಗಾಗಿ ಅರಣ್ಯ ಭೂಮಿಯನ್ನು ಬಳಸಲು ನೀಡಿರುವ ಅನುಮತಿಯನ್ನು ಹಿಂಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎರಡನೇ ಆದೇಶದಲ್ಲಿ, ಸರಕಾರ 13,788 ಚದರ ಅಡಿ ಕಾಯ್ದಿರಿಸಿದ ಮತ್ತು ಗುರುತಿಸಿದ ಅರಣ್ಯ ಭೂಮಿಯನ್ನು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ಗೆ ಬಳಸಲು ಸರಕಾರ ಅನುಮೋದಿಸಿದೆ. ಅಮರಾವತಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೈಸರ್ಗಿಕ ಅನಿಲ ವಿತರಣಾ ಜಾಲವನ್ನು ಸ್ಥಾಪಿಸಲು ಉಕ್ಕಿನ ಪೈಪ್ಲೈನ್ ಅಳವಡಿಸಲು ಈ ಭೂಮಿಯನ್ನು ಕಂಪೆನಿ ಬಳಸಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಎರಡು ಸರಕಾರಿ ಆದೇಶಗಳು ಒಟ್ಟಾಗಿ ಸುಮಾರು 0.78 ಹೆಕ್ಟೇರ್ ಅರಣ್ಯ ಭೂಮಿಯನ್ನು ಒಳಗೊಂಡಿವೆ. ರಾಯಗಢ ಯೋಜನೆಯಲ್ಲಿ ಮ್ಯಾಂಗ್ರೂವ್ ಅರಣ್ಯ ಭೂಮಿ ಒಳಗೊಂಡಿದ್ದರೆ, ಅಮರಾವತಿ ಯೋಜನೆಯಲ್ಲಿ ಮೀಸಲು ಅರಣ್ಯ ಭೂಮಿ ಒಳಗೊಂಡಿದೆ.

