ಕಾಸರಗೋಡು: ಉಕ್ರೇನ್ನ ನಗರ ಒಡೆಸಾ ಕರಾವಳಿಯಲ್ಲಿ ಸರಕು ಸಾಗಾಟದ ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಮೃತಪಟ್ಟಿರುವ ಕಾಸರಗೋಡಿನ ವೆಳ್ಳರಿಕುಂಡು ಎಕೆಜಿ ನಗರದ ನಿವಾಸಿ ಅಖಿಲ್ ಜೋಯಲ್(26) ಮೃತದೇಹ ಸೋಮವಾರ ತಾಯ್ನಾಡಿಗೆ ಆಗಮಿಸಿದೆ.
ಎಕೆಜಿ ನಗರದ ಜೋಯಲ್-ಸಾಲಿ ದಂಪತಿಯ ಏಕ ಪುತ್ರ ಅಖಿಲ್ ಜೋಯೆಲ್ ಅವರ ಮೃತದೇಹ ಮನೆಗೆ ತಲುಪುತ್ತಿದ್ದಂತೆ ಹೆತ್ತವರ ರೋದನ ಮುಗಿಲುಮುಟ್ಟಿತ್ತು. ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್, ಜಿಪಂ ಅಧ್ಯಕ್ಷ ಸಾಬು ಅಬ್ರಹಾಂ, ಮಾಜಿ ಶಾಸಕ ಎಂ.ರಾಜಗೋಪಾಳನ್ ಸೇರಿದಂತೆ ಹಲವು ಮಂದಿ ಅಂತಿಮದರ್ಶನ ಪಡೆದರು. ಗಿನಿಯಾ-ಬಿಸಾವು ಧ್ವಜವನ್ನು ಹೊಂದಿದ್ದ ಹಡಗಿನ ಮೇಲೆ ರಷ್ಯಾದ ಕ್ರೂಸ್ ಕ್ಷಿಪಣಿ ದಾಳಿ ನಡೆದಿರುವುದಾಗಿ ಉಕ್ರೇನ್ ವಾಯುಪಡೆ ವರದಿ ಮಾಡಿದೆ. 'ಗೋಲ್ಡನ್ ಲಿಯೋ' ಹೆಸರಿನ ಈ ಹಡಗಿನಲ್ಲಿ ಭಾರತೀಯ ಮತ್ತು ಸಿರಿಯನ್ ನಾವಿಕರಿದ್ದರು. ಗಿನಿಯಾ-ಬಿಸಾವು ಧ್ವಜವನ್ನು ಹೊಂದಿದ್ದ ಹಡಗಿನ ಮೇಲೆ ಜುಲೈ 19ರಂದು ರಷ್ಯಾದ ಕ್ರೂಸ್ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಅಖಿಲ್ ಸಾವನ್ನಪ್ಪಿದ್ದರು.
ಹತ್ತೊಂಬತ್ತನೇ ವಯಸ್ಸಿನಲ್ಲೇ ಹಡಗಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಅಖಿಲ್ಜೋಯಲ್, ಒಬ್ಬ ಉತ್ತಮ ಹಗ್ಗಜಗ್ಗಾಟ ಕ್ರೀಡಾಪಟುವಾಗಿದ್ದರು. ರಜೆಯಲ್ಲಿ ಊರಿಗೆ ಆಗಮಿಸಿದ್ದ ಅಖಿಲ್ ಅವರು ತಮ್ಮ ವಿವಾಹ ನಿಶ್ಚಿತಾರ್ಥ ನಡೆಸಿದ ನಂತರ, ಒಂದು ತಿಂಗಳ ಹಿಂದಷ್ಟೇ ಕೆಲಸಕ್ಕೆ ವಾಪಸಾಗಿದ್ದರು. ದುರಂತ ನಡೆದ ಒಂದು ತಿಂಗಳ ನಂತರ ಮೃತದೇಹ ತಾಯ್ನಾಡಿಗೆ ಬಂದು ಸೇರಿದೆ.

